Saturday, December 22, 2012

ಸಭ್ಯ ಸಮಾಜ ಇದನ್ನ ಒಪ್ಪಲ್ವಾ..?



                                                                         ಹೆಣ್ಣು ಅಂದರೆ ಸಹನೆ, ಹೆಣ್ಣು ಅಂದರೆ ಧರಿತ್ರಿ, ಹೆಣ್ಣು ಅಂದರೆ, ತಾಯಿ ಹೆಣ್ಣು ಅಂದರೆ ಸೋದರಿ  ಹೆಣ್ಣು ಅಂದ್ರೆ ಗೆಳತಿ ಹೆಣ್ಣು ಅಂದರೆ ಒಡತಿ .. ಎಲ್ಲವೂ ನೀನು.. ಸೃಷ್ಟಿ ನೀನು.. ವೃಷ್ಟಿ ನೀನು .. ನಿನಗೆ ಗೊತ್ತಾ ಮುಷ್ಟಿಯೊಳಗಿಟ್ಟು ಕಷ್ಟಕೊಟ್ಟವರನ್ನೂ ಪ್ರೀತಿಸಿದವಳು ನೀನು.. ಹೆಣ್ಣು ಅಂದ್ರೆ  ಹರಿದು ಹಂಚಿ ತಿನ್ನೋ ಹಣ್ಣು ಅಂತ ಅಂದರೂ ಸಹಿಸ್ಕೋತೀಯಾ ತಾಯಿ.. ಬೇಡ ಈ ಸಹನೆ.. ನನಗನ್ನಿಸತ್ತೆ ಆಕೆಗೆ ಕೊಟ್ಟ ಬಿರುದುಗಳೇ ಅವಳನ್ನ ಅಸಹಾಯಕಳನ್ನಾಗಿ ಮಾಡಿಸಿದ್ದು.. ಅವಳಿಗೊಂದು ಸೀಮಿತ ರೂಪವನ್ನ ಕೊಟ್ಟಿದ್ದು..

                                                                       ಅವಳು ಸಹನಾಮಯಿ ಅಂದ್ರು.. ಆಕೆ ಬದುಕಿನ ಕಷ್ಟಗಳನ್ನೆಲ್ಲಾ ಅವಡುಗಚ್ಚಿಕೊಂಡು ಸಹಿಸಿಕೊಂಡ್ಲು.. ಭೂಮಿಯ ತೂಕ ನೋಡಿ  ಆಕೆಗೆ ಯಾರೂ ಭಾರವಾಗಲಿಲ್ಲಾ.. ದಣಿದವರಿಗೆ ಮಡಿಲಲ್ಲಿ ಮಲಗಿಸಿ ಜೋಗುಳ ಹಾಡಿದ್ಲು .. ಹಸಿದವರಿಗೆ ತುತ್ತಿಟ್ಟು ತಾಯಿಯಾದಳು.. ಸೋತು ಕೂತವರಲ್ಲಿ ಭರವಸೆ ತುಂಬುವ ಸಾಥಿಯಾದ್ಲು... ಇದ್ಯಾವುದೂ ಅವಳ ಬದುಕಿನ ದೊಡ್ಡ ಸಮಸ್ಯೆ ಆಗ್ತಿರ್ಲಿಲ್ಲ.. ಯಾಕಂದ್ರೆ ಅಲ್ಲೆಲ್ಲಾ ಮನಸು ಮಾತಾಡೋದು.. ಆದ್ರೆ ಯಾವಾಗ ದೇಹದ ಮಾತಿಗೆ ಹೂಂ ಗುಟ್ಟಿ ಪುರುಷನ ದೈಹಿಕ ವಾಂಛೆಗಳನ್ನ ತೀರಿಸಲು ದಾರಿಯಾದಳು ನೋಡಿ ಅಲ್ಲಿಂದ ಶುರುವಾಯ್ತು ಸಮಸ್ಯೆ..!

                                                                      ಹೆಣ್ಣಾಗಿ ಹುಟ್ಟೋದು ಸೌಭಾಗ್ಯಾನಾ? ನನ್ನ ಬದುಕನ್ನ ಅವಲೋಕಿಸಿಬಿಟ್ರೆ ನನಗೆ ಹೌದು ಪುಣ್ಯ ಮಾಡಿದವರಿಗೆ ಮಾತ್ರ ಪ್ರಕೃತಿಯಾಗೋ ಅವಕಾಶ ಸಿಗತ್ತೆ ಅನ್ನಿಸುತ್ತೆ.. ಆದ್ರೆ ಸಮಾಜವನ್ನ ನೋಡಿದ್ರೆ ಹೆಣ್ಣು ಶಾಪಗ್ರಸ್ಥ ಸೃಷ್ಟಿ ಅನ್ನಿಸಿಬಿಡೋದು ಸುಳ್ಳಲ್ಲಾ.. ಹುಟ್ಟಿನಿಂದ ಶುರುವಾಗತ್ತೆ ತಾರತಮ್ಯ.. ಹೆಣ್ಣಾದರೆ ಮಾತ್ರ ಕಣ್ಬಿಡುವ ಮುನ್ನವೇ ಭ್ರೂಣ ಹತ್ಯೆಯ ಹೆಸರಲ್ಲಿ ಸಾಯುವ ಸಂಕಷ್ಟ.. ಎಲ್ಲರಿಗೂ ವಂಶೋದ್ಧಾರಕ ಬೇಕು, ಮುಕ್ತಿ ಮಂತ್ರ ಪಠಿಸುವವ ಬೇಕು.. ಅಂಥವರಿಗಂತೂ ಹುಟ್ಟಿದ ಮಗು ಹೆಣ್ಣಾದ್ರೆ ಹೆತ್ತವಳನ್ನೂ ಬಲಿಕೊಟ್ಟುಬಿಡೋ ಮನಸಾಗತ್ತೆ.. ಆ ಕ್ರೂರ ಮನೋಭಾವ ಈಗ ನಿಧಾನಗತಿಯಲ್ಲಾದರೂ ಸರಿ ದೂರ ಹೋಗ್ತಿದೆ.. ಅಲ್ಲಿ ಇಲ್ಲಿ ನಡೆಯೋ ಒಂದೊಂದು ಪ್ರಕರಣಗಳಿಗೆ ಕಾನೂನು ಕಠಿಣ ಶಿಕ್ಷೆಯನ್ನ ಕೊಟ್ಟು ದಾರಿಗೆ ತರುವ ಪ್ರಯತ್ನ ಮಾಡ್ತಿದೆ.. ಒಟ್ಟಲ್ಲಿ ಗಂಡು ಮಗುನೇ ಬೇಕು ಅಂತ ನಿಲ್ಲೋರ ಸಂಖ್ಯೆ ಕಡಿಮೆ ಆಗ್ತಿದೆ.. ಇದರಿಂದ ಪ್ರಕೃತಿಯಲ್ಲಿ ಮತ್ತೆ ಬ್ಯಾಲೆನ್ಸ್ ಆಗಬಹುದು ಅನ್ನೋದು  ಒಂದು ಆಶಾ ಭಾವ.  ಆದ್ರೆ ಇವತ್ತಿನ ಪರಿಸ್ಥಿತಿಯಲ್ಲಿ ಹುಟ್ಟೋ ಮಗು ಹೆಣ್ಣೋ ಗಂಡೋ ಯಾವುದಾದರೂ ಒಂದೇ ಅಂತ ಅಂದ್ಕೊಳ್ಳೋರ ಮನಸಲ್ಲೂ ಹೆಣ್ಣುಮಗು ಹಿಟ್ಟಿದಾಗ ಆಗೋ ಖುಷಿನೇ ಬೇರೆ, ಗಂಡು ಹುಟ್ಟಿದಾಗ ಆಗೋದೇ ಬೇರೆ.. ಹೆಣ್ಣಿನ ವಿಷಯಕ್ಕೆ ಬಂದಾಗ ಆಕೆಯ ಸೇಫ್ಟಿ ಭಯ ಹುಟ್ಟಿಸಿಬಿಡುತ್ತೆ..  ಈ ಸಮಾಜದಲ್ಲಿ ಹೆಣ್ಣುಮಗಳನ್ನ ಕಾಪಾಡಿಕೊಳ್ಳೋದು ಅದೆಂಥಾ ಕಷ್ಟ ಅನ್ನೋದು ಹೆಣ್ಣು ಹೆತ್ತವರಿಗಷ್ಟೇ ಅಲ್ಲಾ , ಪ್ರತಿಯೊಬ್ಬ ಪುರುಷನ ಪೌರುಷತ್ವಕ್ಕೂ ಗೊತ್ತು.. ಹೆರುವ ತಾಯಿಯ ಹೃದಯಕ್ಕೆ ಗೊತ್ತು...

                                                                      ಹೆಣ್ಣಾಗಿ ಹುಟ್ಟಿ ಹುಣ್ಣಾಗುವುದಕ್ಕಿಂತ ಗಿಡದ ಮೇಲಿನ ಹಣ್ಣೇ ವಾಸಿ.. ಹಣ್ಣಾದರು ತಿನ್ನೋದಕ್ಕೆ ಮಾಗಬೇಕು.. ಆದರೆ ಹೆಣ್ಣು ... ಹುಟ್ಟಿದರೆ ಸಾಕು.. ಭೋಗಿಸುವವರಿಗದೆಷ್ಟು ಬಾಗಿಲುಗಳು ಅಂತೀರಾ , ಒಬ್ಬಳು ತಾಯಿ ಅದ್ಯಾವ ಬಾಗಿಲನ್ನ  ಅಂತ ಹಾಕಿಕೊಂಡು  ಬರ್ತಾಳೆ.. ಮಲಗಿಸಿಟ್ಟ ಮಗುವನ್ನ ಮುದ್ದಿಸೋ ನಿರ್ಮಲ ಪ್ರೀತಿಯಲ್ಲೂ ಮೋಸವೇನಾದ್ರೂ ಇದ್ಯಾ ಅಂತ ಹುಡುಕಬೇಕು. ಯಾಕಂದ್ರೆ ಅಪರಿಚಿತರನ್ನ ಬಿಟ್ಟುಬಿಡಿ, ಸ್ನೇಹಿತರು ಸಂಬಂಧಿಕರು ಕೊನೆಗೆ ಸ್ವತಃ ಜನ್ಮ ಕೊಟ್ಟ ತಂದೆ ಕೂಡಾ ಮಾಗದ ಮೊಗ್ಗಿನಂತಾ ಮಗುವಿನ ಮೇಲೆ ಮದವೇರಿಸಿಕೊಂಡು ಮುಗಿಬಿದ್ದ ಉದಾಹರಣೆ ಇದೆ.. ಇವತ್ತಿನ ದಿನ ಇದು ಎಲ್ಲೋ ತೀರಾ ಅಪರೂಪಕ್ಕೊಂದು ದುರ್ಘಟನೆಯಾಗಿ ಉಳಿದಿಲ್ಲ.. ಇದಕ್ಕೆ ಕಾರಣ ಏನು..? ಅರ್ಥವಾಗದೇ ಅಳ್ತಾ ಇರೋರು ನಾವು..!

                          ಹೆಣ್ಣು ಮಗುವಿಗೇ ಈ ಪರಿಸ್ಥಿತಿ ,ಅದೇ ಸ್ಕೂಲು ಕಾಲೇಜು ಅಂತ ಕಳಿಸೋವಾಗ ಇನ್ನೆಷ್ಟು ಕಷ್ಟ ಅನುಭವಿಸಬೇಕು..ಯಾವ ಗಲ್ಲಿಯಿಂದ ಯಾವ ಪೊದೆಯಿಂದ ಇನ್ಯಾವ ವೆಹಿಕಲ್ಲಿಂದ ಕಾಮಾಪಿಶಾಚಿಯ ವಕ್ರ ದೃಷ್ಟಿ ಬೀರತ್ತೆ ಅನ್ನೋದನ್ನ ಹೇಳೋದಾದರೂ ಹೇಗೆ..? ಹೊಸಕಿಹಾಕಿಬಿಡ್ತಾರೆ ಅವಳ ಕನಸುಗಳನ್ನ.. ಮಾಗದ ಮನಸನ್ನ..

                        ಇನ್ನು ಹರಯದಲ್ಲಿ ಹೃದಯ ಸಹಜವಾಗೇ ಹೊಸತನದ ಹುಡುಕಾಟಕ್ಕೆ ನಿಲ್ಲತ್ತೆ.. ಹೃದಯಕ್ಕೆ ಹತ್ತಿರವಾಗುವವರ ಸಂಖ್ಯೆ ದೊಡ್ಡದು.. ಅದು ಸ್ನೇಹಾನಾ ಪ್ರೀತಿನಾ ಅಥವಾ ಅದೆಲ್ಲವನ್ನೂ ಮೆಟ್ಟಿ ನಿಲ್ಲುವ ಕಾಮವಾಗಿಬಿಡುತ್ತಾ ? ಯೋಚನೆಯನ್ನೇ ಮಾಡದ ವಯಸ್ಸು ಅದು.. ಆಗ ಪಾರಿಜಾತದಂತಾ ಪೋರಿಯನ್ನ ಆಸ್ವಾದಿಸಿ ಅಡಗಸಿಬಿಡೋ ಅದೆಷ್ಟು ಘಟನೆಗಳು ನಡೆದಿಲ್ಲಾ..? ಹೇಗೆ ಆಕೆ ಈ ದೌರ್ಜನ್ಯದಿಂದ ಬಚಾವ್ ಆಗೋದು.

                                                                ಈಗ ಹುಡುಗಿ ಮನೆಯೊಳಗೆ ಸೆರಗೊದ್ದು ಗಂಡನ ಪಾದಕ್ಕೆ ಹಣೆ ಹಚ್ಚಿ ಅಪ್ಪಟ ಪತಿವೃತ ಗೃಹಿಣಿಯಂತೆ ತನ್ನನ್ನ ತಾನು ಬಿಂಬಿಸಿಕೊಳ್ಲೋದಕ್ಕೆ ಇಷ್ಟಾಪಡಲ್ಲಾ. ತಾನು ಪುರುಷನಿಗೆ ಸರಿಸಮಾನಳು ಅಂತಾಳೆ.. ಭಟ್ಟೆಯಷ್ಟೇ ಬದಲಾಗೋದಲ್ಲ.. ಆಕೆಯ ವ್ಯಕ್ತಿತ್ವವೇ ಬದಲಾಗತ್ತೆ.. ಯಶಸ್ಸಿನ ಹಾದಿ ದಿಕ್ಕು ನೋಟ ಎಲ್ಲವೂ ಬದಲಾಗತ್ತೆ. ಮನೆಯಿಂದ ಹೊರಬರ್ತಾಳೆ.. ಗಗನದೆತ್ತರಕ್ಕೆ ಹಾರ್ತಾಳೆ.. ಕಬ್ಬಿಣದ ಕಡಲೆಯನ್ನೂ ಜಗಿದು ತೋರಿಸ್ತಾಳೆ.. ಬದುಕಿನ ಭಾರವನ್ನ ಬುಜದ ಮೇಲೆ ಹೊತ್ತು ನಿಂತು ಗೆಲುವಿನ ನಗೆ ಬೀರ್ತಾಳೆ.. ಎಲ್ಲದರಲ್ಲೂ ಹುಡುಗಿ ಗೆಲ್ಲಬಲ್ಲಳು.. ಮನೆಯ ಹೊರಗೆ ಒಳಗೆ.. ಆದ್ರೆ ಸೆಕ್ಸ್ ವಿಷಯದಿಂದ ಸಮಾಜದಲ್ಲಿ  ಅವಳ ಮೇಲೆ ಆಗೋ ದೌರ್ಜನ್ಯವನ್ನ ಆಕೆಯಿಂದ ಗೆಲ್ಲೋದಕ್ಕೆ ಆಗುತ್ತಾ.. ? ಹುಡುಗಿ ಅನ್ನೋ ಕಾರಣಕ್ಕೆ ಅವಳು ಅವಕಾಶ ವಂಚಿತಳಾಗಲ್ವಾ..?  ಆಕೆಯ ಮೇಲೆ ನಡೆಯೋ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ಕಡಿಮೆ ಅಲ್ಲಾ.

                                                                ಹೆಣ್ಣನ್ನ ಭೋಗದ ವಸ್ತು ಅಂದುಕೊಳ್ಳದಿದ್ದರೆ ಕಾಮ ಅನ್ನೋದು ಕೆಟ್ಟದ್ದಲ್ಲಾ..ಆದ್ರೆ ಸಮಾಜ ಅದನ್ನ ಕೆಟ್ಟದ್ದನ್ನಾಗಿ ಮಾಡ್ತಿದೆ.. ಜನ ಅದನ್ನ ಕೆಟ್ಟ ದೃಷ್ಟಿಯಲ್ಲಿ ನೋಡ್ತಿದ್ದಾರೆ..   ನಿದ್ದೆ ಊಟ ಎಲ್ಲಾ ಇದ್ದಹಾಗೆ ಸೆಕ್ಸ್ ಕೂಡಾ.. ಅದು ಮಹಿಳೆಗಿಂತ ಪುರುಷನಿಗೆ ಒಂದು ಹಂತಕ್ಕೆ ಅನಿವಾರ್ಯ.. ಆ ಅನಿವಾರ್ಯತೆಯನ್ನ ಮಹಿಳೆ ದಾಳವಾಗಿಟ್ಟುಕೊಂಡು ಆಡೋಹಾಗೆ ಇದ್ದುಬಿಟ್ಟಿದ್ರೆ ಇಷ್ಟೊತ್ತಿಗೆ ಪುರುಷ ಪ್ರಧಾನತೆ ಹೋಗಿ ಮಹಿಳೆಯ ಪ್ರಾಭಲ್ಯ ನೆಲೆಸಿಬಿಟ್ಟಿರೋದು.. ಆದ್ರೆ ಇಲ್ಲಿ ಪ್ರಧಾನತೆ ಅಲ್ಲಾ ಇಂಪಾಟರ್ೆಂಟು.. ಮನಸ್ಥಿತಿ.. ಪರಸ್ಪರ ಗೌರವದ ಭಾವ.. ಬೆರೆವ ಪ್ರೀತಿ.. ಎಲ್ಲಿ ದೇಹಗಳಲ್ಲದೆ ಮನಸುಗಳ ಮಿಲನವಾಗತ್ತೋ ಅಲ್ಲಿ ನಿಜವಾದ ಸುಖದ ಅನುಭೂತಿಯಾಗುತ್ತೆ.. ಅಂಥಾ ಕಾಮವನ್ನ ದೇವರನ್ನ ತೋರಿಸೋ ದಾರಿ ಅಂದಿದ್ದ ಓಶೊ.. ಅದನ್ನ ಅರ್ಥಮಾಡ್ಕೊಂಡವರು ಕಡಿಮೆ.. ಹಂಗಾಗಿ ಇವತ್ತಿಗೂ ಸಮಾಜದ ದೃಷ್ಟಿಯಲ್ಲಿ ಅದು ಕೆಟ್ಟದ್ದು. ಕಾಮ ಅನ್ನೋದು ಯಾವಾಗ ಕೆಟ್ಟದ್ದಾಗತ್ತೆ ಅನ್ನೋ ಬಗ್ಗೆ ಯೋಚಿಸೋರು ಕಡಿಮೆ.

                                                                ಹೆಂಡತಿ ಕಂಪ್ಲೆಂಟ್ ಕೊಡೋದಕ್ಕೆ ಬರ್ತಾಳೆ .. ಗಂಡನಿಂದಲೇ ರೇಪ್ ಆಗಿದೆ ಅಂತ.. ಆದ್ರೆ ಅದನ್ನ ತಗೋಬೇಕು ಅಂತ ಪೊಲೀಸರಿಗೆ ಅನ್ನಿಸಲ್ಲಾ.. ಇದೆಂಥಾ ಮಾತಾಡ್ತಾಳಪ್ಪಾ ಇವಳು ಅಂತ ನಕ್ಕುಬಿಡ್ತಾರೆ.. ಹಾಗಾದ್ರೆ ಮದುವೆಯ ಚೌಕಟ್ಟಲ್ಲಿ ಒಂದಾಗಿಬಿಟ್ಟ ಮಾತ್ರಕ್ಕೆ ಬಲಾತ್ಕಾರ ನಡೆಯಲ್ಲಾ ಅಂತಾನಾ..? ಪರಸ್ಪರ ಒಪ್ಪಿಗೆ ಇಲ್ಲದೆ ಸೇರೋದೆಲ್ಲಾ ಬಲಾತ್ಕಾರ ಅನ್ನೋದು ತುಂಬಾ ಜನರಿಗೆ ಇವತ್ತಿಗೂ ಅರ್ಥವಾಗಿಲ್ಲ.. ಇನ್ನು ವಿವಾಹೇತರ ಸಂಬಂಧ ಇಟ್ಟುಕೊಂಡ ಹೆಣ್ಣುಮಗಳೊಬ್ಬಳು ಒಂದು ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ಬೇರೆಯಾದವನ ವಿರುದ್ಧ ರೇಪ್ ಕೇಸ್ ಕೊಡ್ತಾಳೆ.. ಅದನ್ನ ಮರು ಮಾತಾಡದೇ ತಗೊತಾರೆ.. ಅದ್ಹ್ಯಾಗೆ ರೇಪ್ ಆಗುತ್ತೆ ಹೇಳಿ.. ನಂಬಿಕೆ ದ್ರೋಹ ಅಷ್ಟೆ. ಅದೇ ಮನಸು ಮಾಗದ ಹುಡುಗಿಯೊಬ್ಬಳಿಗೆ ಪುಸಲಾಯಿಸಿ ಅನುಭವಿಸಿ ಅವಳು ಒಪ್ಪಿದ್ಲು ಅಂದ್ರೆ ತಪ್ಪಾಗತ್ತೆ. ಆದ್ರೆ ಒಂದು ನೆನಪಿರಲಿ ಒಪ್ಪಿ ಒಂದಾಗಲಿ ಒಪ್ಪದೇ ಒಂದಾಗ್ಲಿ ತಪ್ಪು ನಡೆದಾಗ ಅದರಲ್ಲಿ ನಷ್ಠವಾಗೋದು ಹೆಣ್ಣಿಗೆ.. ಪೆಟ್ಟು ಬೀಳೋದು ಹೆಣ್ಣಿಗೆ .. ಸಮಾಜದ ದೃಷ್ಟಿಯಿಂದ ಕುಸಿದು ಬೀಳುವವಳು ಹೆಣ್ಣು.. ಹಾಗಿದ್ದಾಗ ಮಾಡಿದ ತಪ್ಪುಗಳನ್ನೆಲ್ಲಾ ಮೀರಿ ಬರೋ ಯೋಚನೆ ಹೆಣ್ಣಾಗಿ ಹುಟ್ಟಿದ್ದೇ ತಪ್ಪು ಅಂತ.!

                                                                ಮಗಳನ್ನ ಜೋಪಾನ ಮಾಡೋದಕ್ಕಾಗದೆ ಕಣ್ಣೀರಿಡೋ ತಂದೆಯನ್ನ ನೋಡಿದಾಗ ಗಂಡಸರು ಕೂಡಾ ಅಸಹಾಯಕರು ಅಂತ ನನಗೆ ಅನ್ನಿಸಿರ್ಲಿಲ್ಲ.. ಹೆಣ್ಣು ಹೆತ್ತವರ ಕಷ್ಟ ಇದು ಅನ್ಸಿತ್ತು.. ಆದ್ರೆ ಯಾವಾಗ ತನ್ನ ಗೆಳತಿಯನ್ನ ರಕ್ಷಿಸೋದಕ್ಕಾಗದೆ ಹುಡುಗನೊಬ್ಬ ಕುಸಿದು ಕೂರ್ತಾನೋ ಆಗ ಇಡೀ ಸಮಾಜವೇ ಅಸಹಾಯಕವಾಗಿದೆ ಅನ್ನಿಸಿಬಿಟ್ತು.. ದೆಹಲಿಯಲ್ಲಿ ನಡೆದ ಕೇಸು ಪುರುಷರು ತಲೆತಗ್ಗಿಸೋದೊಂದೇ ಅಲ್ಲಾ ಸಿಡಿದೇಳೋ ಹಾಂಗ್ ಮಾಡ್ತು. ಇನ್ನಾದ್ರೂ ಇದಕ್ಕೆ ಕಡಿವಾಣ ಬೀಳದೇ ಇದ್ರೆ ಹೇಗೆ..?


                                  ನ್ಯಾಯಕ್ಕಾಗಿ ಹೋರಾಟ ಶುರುವಾಗಿದೆ.. ಲಿಂಗ ಬೇಧವಿಲ್ಲದೆ ಜನ ಬೀದಿಗಿಳಿದಿದ್ದಾರೆ.. ತಪ್ಪಿತಸ್ಥರಿಗೆ  ತಕ್ಷಣ ಶಿಕ್ಷೆ ಆಗ್ಬೇಕು ಅನ್ನೋದೇ ಬೇಡಿಕೆ.. ಗಲ್ಲಿಗೇರಿಸಿ ಅಂತ ಕೇಳ್ಕೋತಿರೋರು ತುಂಬಾ ಜನ.. ಆದ್ರೆ ಅವರಿಗೆಲ್ಲಾ ನನ್ನದೊಂದು ಪ್ರಶ್ನೆ ಆ ರೇಪಿಸ್ಟ್ ಗಳನ್ನ ಸಾಯಿಸಿದ್ರೆ ಆ ಹುಡುಗಿಗೆ ನ್ಯಾಯ ಸಿಕ್ಕಂಗಾಗತ್ತಾ..? ಅವಳು ಬದುಕಿನುದ್ದಕ್ಕೂ ಅನುಭವಿಸೋ ಯಾಥನೆಯನ್ನ ಇವರು ಅನುಭವಿಸ್ತಾರಾ..? ಅನುಭವಿಸಬೇಕು.. ಸಮಾಜದಲ್ಲಿ ತಲೆ ಎತ್ತಿ ನಡೆಯಲಾಗದ ಪರಿಸ್ಥಿತಿ ಅವರಿಗೆ ಎದುರಾಗಬೇಕು.. ಅಂಥವರ ಬದುಕಲ್ಲಿ ಮುಂದೆ ಯಾವತ್ತೂ ಹೆಣ್ಣಿನ ಛಾಯೆಕೂಡಾ ಬೀಳದಂತಾಗ್ಬೇಕು.. ಮದುವೆ ಆದವರಾದ್ರೆ  ಸ್ವಂತ ಹೆಂಡತಿಯ ಜೊತೆಗೂ ಇನ್ಯಾವತ್ತೂ ಸುಖಪಡಬಾರದು.. ಯಾವ ಪುರುಷತ್ವವನ್ನ ಅವರು ದುರುಪಯೋಗ ಪಡಿಸಿಕೊಂಡಿದ್ದಾರೋ ಅದನ್ನೇ ಬೇರುಸಹಿತ ಕೀಳಬೇಕು... ಅಷ್ಟಾದರೆ , ಅವರಷ್ಟೇ ಅಲ್ಲಾ ಇಡೀ ಕಾಮುಕ ಸಮಾಜ ಪಾಠಾ ಕಲಿಯುತ್ತೆ.. ಹೆಣ್ಣುಮಕ್ಕಳನ್ನ ಕೆಟ್ಟ ದೃಷ್ಟಿಯಿಂದ ನೊಡೋರ ಕಣ್ಣಿಗೆ ಕಡಿವಾಣ ಬಿದ್ದಂಗಾಗತ್ತೆ.. ಇದಲ್ವಾ ನಿಜವಾಗಿಯೂ ನಮಗೆ ಬೇಕಾಗಿರೋದು... ಆದ್ರೆ ನಮ್ಮ ಕಾನೂನು ಇದಕ್ಕೆ ಒಪ್ಪತ್ತಾ..?

                                                      ಸಂಸ್ಕೃತಿ ಬದಲಾಗತ್ತೆ... ಸಂಪ್ರದಾಯ ಬದಲಾಗುತ್ತೆ.. ಯೊಚನಾ ಶೈಲಿ ಬದಲಾಗುತ್ತೆ.. ಒಟ್ಟಾರೆ ಬದುಕುವ ರೀತಿಯೇ ಬದಲಾಗುತ್ತೆ.. ಆದ್ರೆ ನಮ್ಮ ಕಾನೂನು ಬದಲಾಗಲ್ಲಾ.. ಅದರಲ್ಲಿ ಅಮೆಂಡ್ಮೆಂಟ್ ತರೋ ಮಾತೇ ಇಲ್ಲಾ.. ಕಾಲಕ್ಕೆ ತಕ್ಕ ಹಾಗೆ , ಸಮಾಜದ ಉನ್ನತಿಗೆ ಬೇಕಾದ ಹಾಗೆ ಯಾಕೆ ಅದು ಬದಲಾಗ್ಬಾದರ್ು..? ಹಾಗಂತ ಬದಲಾವಣೆ ಬರೋದೇ ಇಲ್ಲಾ ಅಂತಲ್ಲಾ.. ಚಿತ್ರ ವಿಚಿತ್ರ ಅನ್ನಿಸೋ ಬದಲಾವಣೆಗಳೂ ನಮ್ಮಲ್ಲಿ ಬರುತ್ವೆ.. ಒಮ್ಮೆ ಅಧಿಕಾರದಲ್ಲಿರೋರು ಆದೇಶಿಸಿಬಿಟ್ರೆ ಮರು ಮಾತನಾಡೋ ಹಕ್ಕು ನಮಗಿಲ್ಲ..  ಒಂದ್ವೇಳೆ ಕಾನೂನಿನ ಆದೇಶವನ್ನ ರಸ್ತೆಯಲ್ಲಿ ನಿಂತು ಧಿಕ್ಕರಿಸೋ ಹಕ್ಕು ,  ಜನಸಾಮಾನ್ಯನಿಗಿದ್ರೆ ಇವತ್ತು ಕಾರ್ಗಳಲ್ಲಿ ಕೂಲಿಂಗ್ ಪೇಪರ್ ತೆಗೀಬೇಕು ಅನ್ನೋದನ್ನ ಜನ ಒಪ್ಕೋತಿದ್ರಾ..?  ಪಾಪಾ ಅವರಾದ್ರೂ ಅನಿವಾರ್ಯವಾಗಿ ಕಾನೂನಿನ ಕಣ್ಣಿಗೆ ಬಟ್ಟೆ ಕಟ್ತಾರೆ.. ಕಾರುಗಳಿಗೆ ಕರ್ಟನ್ ಹಾಕ್ತಾರೆ.. ಅಲ್ಲಿಗೆ ಕಾರಿನೊಳಗೆ ಅದೇನ್ ಅಕ್ರಮ ನಡೆದ್ರೂ ಖಾಕಿಗಳು ಕಣ್ಣು ಹಚ್ಚಿ ನೊಡೋಕಾಗಲ್ಲಾ.. ಅಲ್ಲಿಗೆ ಇದೊಂದು ಕಾನೂನು ಬಂದು ಏನ್ ಪ್ರಯೋಜನ.. ಜನರ ಕಷ್ಟ ಸುಖಗಳನ್ನೂ ಅರ್ಥ ಮಾಡ್ಕೊಂಡು ಆರ್ಡರ್ ಮಾಡ್ಬೇಕು.. ಅದೇನೂ ಇಲ್ಲದೆ ವಿಚಿತ್ರ  ಬದಲಾವಣೆಗಳು ಯಾವ ಸದ್ದಿಲ್ಲದೆ ಬಂದು ಸೇರ್ಕೊಂಬಿಡುತ್ವೆ.. ಆದ್ರೆ ಇಡೀ ಸಮಾಜದ ಸ್ವಾಸ್ತ್ಯ ಕಾಪಾಡಬಹುದಾದ , ದೇವತಾರೂಪಿ ಹೆಣ್ಣಿಗೆ ನಿಜಕ್ಕೂ ರಕ್ಷಣೆ ಕೊಡಬಹುದಾದ ಒಂದು ಮಹತ್ವದ ತೀಪರ್ು ಕಾನೂನಿನ ಪುಠದೊಳಗೆ ಯಾಕೆ ಸೇರ್ಪಡೆ ಆಗಲ್ಲಾ..? ಈ ನಿಟ್ಟಿನಲ್ಲೂ ಒಂದು ಹೋರಾಟ ನಡೆದರೆ ಸೂಕ್ತ..

                                                           ಅಂದ್ಹಾಗೆ ಇದು ಪುರುಷ ವಿರೋಧಿ ನೀತಿ ಅಲ್ಲಾ..ಸ್ತ್ರೀ ವಾದವೂ ಅಲ್ಲಾ..  ಕಣ್ಣಿಗೆ ಕಾಣುವ ಸಮಾಜದ ಕರಾಳ ಮುಖದ ಅವಲೋಕನ.. ಬದಲಾವಣೆ ಕಾಣದ ಅಸಮಾಧಾನ.. ಅಸಹಾಯಕತೆಯ ಬೇಸರ.. ಕೊನೆಯದಾಗಿ ಕಾಮುಕರ ಕೈಗೆ ಸಿಕ್ಕಿ ನರಳಾಡಿದ ಹುಡುಗಿಯರಿಗೆ ಮುಂದೊಂದು ದಿನ ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ ಬರಬಹುದು ಅನ್ನೋ ಭರವಸೆಯ ಸಾಂತ್ವನ ಅಷ್ಟೆ.. 

Friday, January 6, 2012

ನಾನು- ನನ್ನ ಲೋಕ..!





ಆ ಪುಟ್ಟ ಲೋಕ ಸಂದರವಾಗಿತ್ತು.. ಅಲ್ಲಿ ನಾನೊಬ್ಬಳೇ ಇದ್ದೆ.. ನನಗಿಷ್ಟವಾಗಿದ್ದನ್ನೇ ನನಗೆ ಕೊಡ್ತಾ ಇದ್ರು.. ಇಲ್ಲಾ ಅಂದ್ರೆ ನಾನು ಸುಮ್ಮನಿರ್ತಾ ಇದ್ನಾ ? ಅರಚಾಡಿ ,ಉಳ್ಳಾಡಿಬಿಡ್ತಿದ್ದೆ.. ನನ್ನ ಮೇಲಿನ ಭಯಕ್ಕೇ ಇರಬೇಕು ನನಗೆ ಹಿತ ಅನ್ನಿಸೋ ಥರಾನೇ ಇರ್ತಾ ಇದ್ರು.. ನನಗೆ ಸರಿಹೊಗೋ ಥರಾ ಮಲಗಿಕೊಳ್ತಾ ಇದ್ರು.. ನನಗೆ ಚಳಿ ಆಗದ ತರ ನೋಡ್ಕೋತಿದ್ರು.. ಹಸಿವು ಕಾಡದಂತೆ ಕಾಳಜಿವಹಿಸ್ತಾ ಇದ್ರು.. ಒಟ್ಟಲ್ಲಿ ನಾನು ಅಲ್ಲಿ ರಾಣಿ.. ಆ ಅನುಭವದ ಉತ್ತುಂಗದ ಸಂಭ್ರಮದಲ್ಲಿ ನಾನಿದ್ದಾಗಲೇ ಅದೇನೋ ಒತ್ತಡ.. ತಲೆತಿರುಗಿದಂತಾಗಿತ್ತು.. ನನಗೆ ಹೊರಳಾಡೋದಕ್ಕೇ ಆಗಲಿಲ್ಲ.. ಇದ್ದ ಜಾಗಾ ಜಾರುತ್ತಿತ್ತು.. ಜೋರಾಗಿ ಕೂಗಿಕೊಂಡರೂ ಪ್ರಯೋಜನ ಆಗಲಿಲ್ಲ.. ನಾನು ದೊಡ್ಡದ್ಯಾವುದೋ ಸಂಕಷ್ಟದಲ್ಲಿ ಸಿಲುಕಿದ್ದೆ.. ನಿಂತಜಾಗ ಕುಸಿದಂತಾಗಿತ್ತು.. ನಾನು ನನ್ನಲೋಕದಿಂದ ಅಷ್ಟಷ್ಟಾಗಿ ಹೊರಹೋಗ್ತಾ ಇದ್ದೆ.. ಕೊನೆಗೆ ಒಮ್ಮೆಲೇ ನಾನು ಕಂಡುಕೇಳರಿಯದ ಬೇರೆಯದೇ ಲೋಕ ನನ್ನ ಕಣ್ಣಮುಂದಿತ್ತು.. ಭಯಾ ಆಗಿ ಚೀರಿಕೊಂಡೆ..

ನಾನು ಎಲ್ಲಿದ್ದೀನಿ, ನನಗೆ ಏನ್ ಮಾಡ್ತಾ ಇದ್ದಾರೆ  ಒಂದೂ ಅರ್ಥವಾಗ್ತಾ ಇರಲಿಲ್ಲ.. ಈ ವಿಚಿತ್ರಲೋಕದಲ್ಲಿ ಕಣ್ಣು ಬಿಡೋದಕ್ಕೂ ನನಗೆ ಭಯ.. ಯಾವುದೋ ದೊಡ್ಡ ಜೀವಿ ನನ್ನನ್ನ ಒರಟೊರಟಾಗಿ ಮೇಲೆತ್ತಿದಾಗ, ಉಸಿರೇ ನಿಂತ್ಹೋದಾಂಗ್ ಆಗಿತ್ತು.. ನಾನು ಇಲ್ಲಿ ಜಾಸ್ತಿ ಹೊತ್ತು ಇರಬಾರದು ಅನ್ನೋ ಯೋಚನೆ ಬಂದು ,ಏಳೋದಕ್ಕೆ ನೋಡಿದೆ.. ಕೈ ಕಾಲು ಯಾವುದರಲ್ಲೂ ಭಲ ಇರಲಿಲ್ಲ.. ಎಲ್ಲವೂ ಗಾಳಿಯಲ್ಲಿ ತೇಲಿದಂತಾಗತೊಡಗಿತ್ತು.. ಕಷ್ಟಾಪಡ್ತಾ ಇದ್ದೆ.. ಆಗಲೇ ನನ್ನನ್ನ ಪರಿಚಿತವಾದದ್ದೇನೋ ಸೋಕಿತ್ತು.. ಅದೇನು ಗೊತ್ತಾಗಲಿಲ್ಲ.. ನಂತ್ರ ಅದರ ಸ್ಪರ್ಷ ಹಿತ ಅನ್ನಿಸೋದಕ್ಕೆ ಶುರುವಾಯ್ತು.. ಮತ್ತೆ ಬೆಚ್ಚನೆಯ ಅನುಭವ.. ಮತ್ತದೇ ಹಿತ.. ಹಸಿವು ಕಾಡಲಿಲ್ಲ.. ಆ ಕಾಳಜಿ .. ಮಮತೆ .. ಪ್ರೀತಿ ಹಳೆಯದೆಲ್ಲವನ್ನೂ ಮರೆಸಿಬಿಟ್ಟಿತ್ತು.. ನಾನು ಅವಳಿಂದಾಗಿ ಈ ಪರಿಸರವನ್ನ ಒಪ್ಪಿಕೊಂಡುಬಿಟ್ಟೆ.. ಆಕೆ ನನಗೆ ಮುದವಾದ ಅನುಭವ ಕೊಟ್ಟವಳು .. ಅವಳು ನನ್ನ ಅಮ್ಮ..

 ಅಮ್ಮನ ಪ್ರಪಂಚದಲ್ಲಿ ನಾನಿದ್ದೆ.. ಆಕೆ ನನ್ನನ್ನ ನೋಡಿ ಏನೋ ಅಂತಿದ್ಲು.. ಅದು ನನಗೆ ಅರ್ಥವಾಗ್ಲಿಲ್ಲ.. ಆದ್ರೆ ಅವಳು ಏನೋ ಹೇಳ್ತಾಳೆ , ಆಗ ನಾನು ಸ್ಪಂಧಿಸಬೇಕು ಅನ್ನೋದು ಗೊತ್ತಾಯ್ತು.. ಅದು ನನ್ನ ಹೆಸರಂತೆ.. ಅವಳೇ ಹೇಳಿದ್ದು.. ಅವಳು ನನಗೆ ತುಂಬಾ ಜನರನ್ನ ಪರಿಚಯಿಸಿದಳು.. ಅಪ್ಪ ಅಜ್ಜ ಅಜ್ಜಿ , ಅಣ್ಣ , ಅಕ್ಕ ಚಿಕ್ಕಪ್ಪ, ಚಿಕ್ಕಯ್ಯ, ಚಿಕ್ಕಮ್ಮ , ಆಂಟಿ , ಅತ್ತೆ ಮಾವ ಅಬ್ಬಬ್ಬಾ ಎಷ್ಟೊಂದು ಜನ ನನ್ನನ್ನ ಅಮ್ಮನ ಥರಾನೇ ಪ್ರೀತಿಸ್ತಾ ಇದ್ರು.. ಅವರೆಲ್ಲರೂ ಇಷ್ಟವಾಗತೊಡಗಿದ್ರು.. ನಾನು ಒಬ್ಬೊಬ್ಬರನ್ನೇ ನೋಡಿದಾಗಲೂ ಹೊಗಳಿ ಅಟ್ಟಕ್ಕೇರಿಸ್ತಾ ಇದ್ರು.. ಹಾಗಾಗೇ ನಾನು ನನ್ನ ಈ ಪ್ರಪಂಚವನ್ನ ಪ್ರೀತಿಸ್ತಾ ಇದ್ದೆ. ಅದಕ್ಕೇ ನನ್ನ ಮುಖದಲ್ಲಿ ನಗು ಮೂಡಿದ್ದು.

ನನಗೆ ಯಾಕೆ ಖುಶಿ ಆಗತ್ತೆ ಅನ್ನೋದು ಮೊದಮೊದಲು ನನಗೇ ಅರ್ತವಾಗ್ತಾ ಇರಲಿಲ್ಲ.. ನಿದ್ದೆಯಲ್ಲೂ ನಗ್ತಾ ಇದ್ನಂತೆ..ಅಮ್ಮಾ ಹೇಳ್ತಿದ್ಲು.. ಆಕೆ ಅದನ್ನ ಹೇಳಿದಾಗಲೂ ನಕ್ಕಿದ್ದೆ.. ಎಲ್ಲರೂ ಕೇಕೆ ಹಾಕಿದ್ರು.. ಆಗ ಗೊತ್ತಾಯ್ತು ನಾನು ಆಗಾಗ ನಗಬೇಕು ಅಂತ.. ಸದಾನಗುನಗುತಾ ಇರೋದು ರೂಡಿ ಆಗಿಹೋಯ್ತು.. ಖುಶಿನೋ ಖುಶಿ.. ಕಾಲು ಕೈ ಎಲ್ಲದರ ಜೊತೆಗೂ ಆಡಿ ನನ್ನದೇ ಭಾಷೆಯಲ್ಲಿ ಮಾತಾಡಿ ಮನಸಿಗೆ ಹತ್ತಿರವಾಗಿಸಿಕೊಂಡೆ.. ದಿನಕಳೆದಹಾಗೆ ನಾನೊಬ್ಬಳೇ ಮಲಗಿದ್ದಲ್ಲಿ ಮಲಗಿರೋದು, ಎಲ್ಲರೂ ನನ್ನನ್ನ ಮತಾಡಿಸಿ ಮಾತಾಡಿಸಿ ಅಲ್ಲಿಂದ ಹೊರಟೋಗ್ತಾರೆ ಅನ್ನಿಸ್ತು.. ಹಾಗಾಗಿ ಜೊತೆಗೆ ಹೊಗೋ ಪ್ರಯತ್ನ ಶುರುಮಾಡಿದೆ.. ಮಲಗಿದ್ದಲ್ಲೇ ಜಾರಿದೆ.. ಮಗ್ಗಲು ಬದಲಿಸಿದೆ.. ಅಮ್ಮಾ ಓಡಿಬಂದು ನೋಡಿ ಎಲ್ಲರನ್ನೂ ಕರೆದು ತೋರಿಸಿದ್ಲು.. ಎಲ್ಲರೂ ಖುಶಿಯಾದ್ರು.. ಅದನ್ನ ನೋಡಿ ನಾನೇನೋ ಸಾಧಿಸಿದ್ದೇನೆ ಅಂತ ಅಂದ್ಕೊಂಡು ಮತ್ತೆ ಮತ್ತೆ ಹಾಗೇ ಮಾಡಿದೆ.. ಯಾವಾಗ ಎಲ್ಲರಿಗೂ ನನ್ನ ಆ ಹೊಸ ಪ್ರಯತ್ನದಲ್ಲಿ ಇಂಟ್ರಸ್ಟ್ ಕಡಿಮೆ ಆಯ್ತು ಅನ್ನಿಸ್ತೋ ಮತ್ತೇನೋ ಮಾಡಿದೆ.. ಮತ್ತೆ  ಖುಶಿ.. ಮುಂದೆ ಹೋದೆ , ಹಿಂದೆ ಬಂದೆ.. ಎಲ್ಲರೂ ನನ್ನನ್ನ ಗುರುತಿಸೋವರೆಗೂ ನಾನು ಮಾಡಿದ್ದನ್ನೇ ಮಾಡಿದೆ.. ಹೊಸತೇನೋ ಮಾಡಿದೆ..!
ಮೊದಲು ಅಪ್ಪನ ಬೆರಳು ಹಿಡಿದು ನಿಂತ ಕ್ಷಣ, ಹೆಜ್ಜೆಯನಿಟ್ಟು ನಡೆದ ದಿನ, ಅಮ್ಮಾ ಅಂದಾಗ ಆದ ಸಂಭ್ರಮ ಎಲ್ಲವೂ ಹಿತವಾಗಿತ್ತು.. ಜೊತೆಗೆ ನಿಂತಷ್ಟೂ ದಿನ ನಿಲ್ಲೋದಕ್ಕೆ ಖುಶಿ ಇತ್ತು.. ಜೊತೆಯಾಗಿ ನಡೆವಾಗ ನಡೆಯೋದರಲ್ಲೇ ಸಡಗರ.. ಮಾತು ಮಾತು ಬೆರೆತಾಗ ಆದ ಸಂಭ್ರಮ ಅಷ್ಟಿಷ್ಟಲ್ಲ.. ನನ್ನ ಆ ಪ್ರಪಂಚದಲ್ಲಿ ನಾನು ತೃಪ್ತಳಾಗಿದ್ದೆ..

ಮತ್ತೆ ದಿನಗಳು ಉರುಳಿದವು.. ಮೊದಲು ನನ್ನ ಒಂದೊಂದು ಹಾವ ಭಾವಗಳನ್ನೂ ಗುರುತಿಸ್ತಾ ಇದ್ದ ಹಾಗೆ, ನಂತರ ಯಾರೂ ಗುರುತಿಸೋರು ಇರಲಿಲ್ಲ.. ಮಾತುಗಳಿಗೆ ನಕ್ಕವರಿಲ್ಲ.. ಹಂಗಾಗೇ ಅಮ್ಮನ ಕೈ ಬಿಟ್ಟು ಗೆಳತಿಯರೆಡೆಗೆ ಓಡಿದೆ.. ಶಾಲೆ ಪಾಠ ಓದು , ಎಲ್ಲಾ ಕಡೆ ನನ್ನನ್ನ ಹೇಗೋ ಗುರುತಿಸಬೇಕು.. ಅದೇ ನನ್ನ ಬದುಕು.. ಗುರುತಿಸಿದಷ್ಟೂ ಸಂಭ್ರಮ.. ಇಲ್ಲವಾದರೆ ಅಲ್ಲಿಂದ ಓಡು.. ಮತ್ತೇನೋ ನನ್ನನ್ನ ಹೆಮ್ಮೆಯಿಂದ ಕೈ ಮಾಡಿ ತೋರಿಸೋ ಥರ ಮಾಡು..

ನನ್ನ ಪ್ರಪಂಚ ಬದಲಾಗುತ್ತಾ ಬಂದಿತ್ತು.. ಹೀಗೆ ನಾನು ಬದುಕಿದ ಅಷ್ಟೂ ದಿನ ನಾನು ಕಡೆಗಣಿಸಿದ್ದು ನನ್ನೊಳಗಿನ ಮಾತನ್ನ.. ನನ್ನ ಭಾವನೆಗಳನ್ನ.. ಆ ಯೋಚನೆ ಬಂದಾಗ ಕನಸುಕಾಣ ತೊಡಗಿದ್ದೆ.. ಒಂಟಿಯಾಗಿ ನಿಂತು ಬಾನಂಗಳವನ್ನ ದಿಟ್ಟಿಸತೊಡಗಿದ್ದೆ.. ಮನಸಿನ ಮಾತುಗಳನ್ನ ಮೌನವಾಗಿ ಆಲಿಸತೊಡಗಿದ್ದೆ.. ಎಲ್ಲವನ್ನೂ ಅವನು ನೋಡ್ತಾ ಇದ್ದ.. ನೋಡಿ ನಕ್ಕಿದ ಥರಾ ಅನ್ನಿಸಿತ್ತು.. ಅವನಿಗೆ ನನ್ನಮನಸನ್ನ ಇಣುಕಿ ನೋಡಿ ಖುಶಿಪಡ್ತಾ ಇದ್ದಾನೆ ಅನ್ನಿಸ್ತು.. ಹಂಗಾಗಿ ಮತ್ತೆ ನನ್ನೊಳಗಿನ ಮಾತುಗಳನ್ನ ಹಂಚಿಕೊಳ್ಳೋ ತವಕ.. ಭಾವನೆಗಳನು ಶಬ್ದವಾಗಿ ಪೋಣಿಸಿದ್ದೆ.. ಮಾತಿನ ಹಾರವನು ಅವನಕೊರಳಿಗೆ ಹಾಕಿದ್ದೆ.. ಅವನ ಕಣ್ ಹೊಳಪಿನಲಿ ಚಿತ್ತಾರಬಿಡಿಸಿದ್ದೆ.. ಆಲಂಗಿಸಿ ಅನುಭವಿಸಿ ಆನಂದವಾಗೋದಕ್ಕೆ ಅವನದಾರಿ ಕಾಯ್ತಿದ್ದೆ.. ಅವನ ನಗುಮುಗವನ್ನ ನೋಡೋದಕ್ಕೆ ತಿಂಗಳು ಕಾಯಲೇಬೇಕು.. ಹುಣ್ಣಿಮೆಯ ವರೆಗೆ...! ಅವನು ಬಾನಂಗಳದಲ್ಲಿ ಬೆಳಕಿನ ರಂಗವಲ್ಲಿ ಬರೆದು ನನಗಾಗಿ ನಿಂತಿರ್ತಾ ಇದ್ದ.. ಐ ಲವ್ ಚಂದಮಾಮ..!

ಚಂದಿರನಂತೆ ನನ್ನ ಪ್ರೀತಿಸಿದವರು.. ಮನಸಿನ ಮಾತುಗಳನ್ನ ಅಲಿಸಿದವರು , ನನ್ನೊಳಗೆ ಬಂದು ಉತ್ತರಿಸಿದವರು ಯಾರೂ ಇರಲಿಲ್ಲ.. ಎಲ್ಲರಿಂದಲೂ ನಾನು ದೂರವಾಗುತ್ತ ಸಾಗಿದ್ದೆ.. ಮನಸಿನಮಾತುಗಳನ್ನ ಹಂಚಿಕೊಳ್ಳೋದಕ್ಕೆ ಯಾರೂ ಇರಲಿಲ್ಲ.. ಅಪ್ಪನದು ಕಾಳಜಿ.. ಅಮ್ಮನದು ಮಮಕಾರ.. ಅಕ್ಕ ಸ್ನೇಹಿತೆಯಾದರೂ ಅವಳೊಂದಿಗೆ ಮನಸನ್ನಬಿಚ್ಚಿಡೋದಕ್ಕೆ ಭಯ..ಅವಳು ನನ್ನ ಭಾವನೆಗಳಿಗೆ ಬಣ್ಣಹಚ್ಚದಿದ್ದರೆ ಅನ್ನೋ ಆತಂಕ.. ಇನ್ನು ಅಣ್ಣ, ಅವನೊಂದಿಗೆ ಕೆಲ ವಿಷಯಗಳನ್ನ ಹೇಳೋದಕ್ಕೇ ಆಗಲ್ಲ.. ಅವನು ನನ್ನಂಥವನಲ್ಲ.. ನನ್ನಂತೆ ಖುಷಿಪಡದಿದ್ದರೆ ನನಗೆ ಇರಸುಮರಸು.. ತಮ್ಮ ಚಿಕ್ಕವನು.. ಸಂಬಂಧಿಕರೆಲ್ಲಾ ದೂರ ದೂರ.. ಆಗ ಹತ್ತಿರವಾಗುವವರು ಸ್ನೇಹಿತೆಯರು .. ಆದ್ರೆ ಅಲ್ಲೂ ಹೃದಯದ ಮಾತುಗಳು ಮಾತ್ರ ನನ್ನೊಳಗೇ ಉಳಿದವು.. ನಾನಾಡದ ಮಾತುಗಳನ್ನ ಅರಿಯೋ, ಅಡಗಿರೋ ಕನಸಿಗೆ ಬಣ್ಣ ಬಳಿಯೋ , ಅರಿವಿಲ್ಲದೇ ಮನಸಿಗೆ ಹತ್ತಿರವಾಗೋ ಒಂದೇ ಒಂದು ಜೀವ ಹತ್ತಿರ ಸುಳಿಯಲಿಲ್ಲ..  ನನ್ನ ಪ್ರಪಂಚ ಬದಲಾಗತೊಡಗಿತ್ತು..!

ಇಷ್ಟು ದಿನ ನಾನು ಈ ಪ್ರಪಂಚವನ್ನ ಪ್ರೀತಿಸಿದ್ದೇ ಸುತ್ತಲಿನ ಪರಿಸರವನ್ನ ನೋಡಿ.. ಜನರನ್ನ ನೋಡಿ.. ಅವರು ನನ್ನನ್ನ ನೋಡಿ ಖುಶಿಪಡೋ ರೀತಿಯನ್ನ ನೋಡಿ.. ನನಗೆ ಸಂಭ್ರಮಿಸೋದಕ್ಕೆ ಇದ್ದ ಕಾರಣಗಳನ್ನ ನೋಡಿ.. ಈಗ ಅದ್ಯಾವುದೂ ಕಾಣಿಸುತ್ತಲೇ ಇಲ್ಲ..! ಯಾಕೆ ಹೀಗೆ ?

ಈಗ ಅರ್ಥವಾಗಿದೆ.. ಇದು ನನ್ನ ಬದುಕಲ್ಲ.. ನನ್ನನ್ನ ಸುತ್ತಲಿನ ಸಮಾಜ ಸೃಷ್ಟಿಸಿದೆ.. ಅದು ಮಾಯಾ ಸೃಷ್ಟಿ.. ಅದು ನಡೆಸಿದಷ್ಟು ದಿನ ನಾನು ನಡೆಯುತ್ತೇನೆ.. ಸಂಭ್ರಮಿಸಿದಷ್ಟು ದಿನ ಸಂಭ್ರಮಿಸುತ್ತೇನೆ.. ಬೆಳೆಸಿದಷ್ಟು ದಿನ ಬೆಳೆಯುತ್ತೇನೆ.. ಉಳಿಸಿದಷ್ಟು ದಿನ ಉಳಿಯುತ್ತೇನೆ.. ಮುಗಿಸಿದ ದಿನ ಮುಗಿಯುತ್ತೇನೆ..!

ಮತ್ತೆ ಅಮ್ಮನ ಉದರದೊಳಗಿನ ಅಪರೂಪದ ಬದುಕು ನೆನಪಾಗುತ್ತಿದೆ.. ಒಳಗೆ ಸೇರಿಕೊಂಡು ಆ ಹಿತವನ್ನ  ಅನುಭವಿಸೋ ಬಯಕೆ.. ಬೆಚ್ಚನೆಯ ಲೋಕದಲ್ಲಿ ವಿಹರಿಸೋ ಬಯಕೆ.. ಸೃಷ್ಟಿಸಿಕೊಳ್ಳಬೇಕು ಅದನ್ನೇ.. ಬದುಕಬೇಕು ಆ ಬದುಕನ್ನೇ.. ನಾನು ಮತ್ತು ನನ್ನ ಬಯಕೆಗಳಷ್ಟೇ ಇರೋ ಆ ಅದ್ಭುತ ಲೋಕ ಮತ್ತೆ ಕಾಣಿಸೋದೇ ಇಲ್ಲವಾ ? ಹುಡುಕುತ್ತಿದ್ದೇನೆ..