Wednesday, April 20, 2011

ಜಪಾನ್ ನಿನಗಿದೋ ಸಲಾಮ್..!



                                   ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಐವರು ಬೈಕ್ ಕಳ್ಳರನ್ನ ಹಿಡ್ಕೊಂಬಂದ್ರು.. ಅವರೆಲ್ಲಾ ಫಿಲ್ಮೀ ದುನಿಯಾದವರು.. ಅಲ್ಲಿ ಬದುಕೋದಕ್ಕೆ ಸಾಕಾಗೋಷ್ಟು ಸಂಪಾಧನೆ ಇಲ್ಲಾ ಅಂತ ಕಳ್ಳತನಕ್ಕಿಳಿದ್ರಂತೆ.. ಕದಿಯೋದು ಅವರ ಪಾರ್ಟ್ ಟೈಮ್ ಕೆಲಸ.. ಕದ್ದಿರೋ ವೇಗ ಸಂಖ್ಯೆಗಳನ್ನೆಲ್ಲಾ ನೋಡ್ಬಿಟ್ರೆ ಗಾಂಧಿನಗರಾನೇ ಪಾಟರ್್ ಟೈಮ್ ಅಡ್ಡೆ ಏನೋ ಅನ್ಸತ್ತೆ.. ಇವರ ಬಗ್ಗೆ ಕೇಳಿದಾಗ  ನನಗೆ ಥಟ್ ಅಂತ ನೆನಪಾಗಿದ್ದು ಜಪಾನ್..!

 ಮಾಚರ್್ ಹನ್ನೊಂದರ ಬೆಳಿಗ್ಗೆ ಸುನಾಮಿ ಎಬ್ಬಿಸಿದ ಅಬ್ಬರವನ್ನ ಟಿವಿಗಳಲ್ಲಿ ನೋಡಿದಾಗ ನಿಜಕ್ಕೂ ನಡುಕ ಹುಟ್ಟಿತ್ತು.. ನಾನು,ನನ್ನ ತಲೆಯ ಮೇಲೆ ಮತ್ತೆ ನಾನು ನಮ್ಮ ಮನೆಯ ಮಾಡು ಪಕ್ಕದಲ್ಲೇ ಇರೋ ಮರ ಉಹು ಯಾವುದಕ್ಕೂ ಆ ಅಲೆಯ ಎತ್ತರ ಇದೆ ಅಂತ ಅನ್ನಿಸಲೇ ಇಲ್ಲಾ.. ಕಥೆಯಲ್ಲಿ ಬರೋ ರಾಕ್ಷಸನಿಗೂ ಕತೆಗಾರನಿಂದ ಅಂಥದ್ದೊಂದು ಧೈತ್ಯ ರೂಪ ಕೊಡೋದಕ್ಕೆ ಸಾಧ್ಯವಾಗ್ಲಿಲ್ಲಾ.. ಇನ್ನು ಸಮುದ್ರವನ್ನೇ ಕಡೆದಾಗ್ಲೂ ನೀರು ಸರಿದು ಸೃಷ್ಟಿಸಿದ ಅವಘಡಗಳ ಬಗ್ಗೆ ಉಲ್ಲೇಖವೇ ಇಲ್ಲಾ.. ಅಂದ್ರೆ ಸುನಾಮಿ ಅನ್ನೋದು ಇತಿಹಾಸ ಕಾರರ ಕಲ್ಪನೆಗೆ ನಿಲುಕಿದ್ದಲ್ಲಾ..! ನಮ್ಮ ಕಣ್ಣಮುಂದಿದೆ.. ಮುಂದೆ ಇತಿಹಾಸವಾಗತ್ತೆ.. ಆ ದುರಂತ ಇತಿಹಾಸದಲ್ಲೂ ಅದೆಷ್ಟು ವಿಧಗಳಾಗತ್ವೋ .. ವಿಭಿನ್ನತೆಗಳಿರತ್ವೋ.. ಉಳಿದೆಲ್ಲಾ ದೇಶಗಳಿಗಿಂತ ಜಪಾನ್ ಮಾತ್ರ ಬೇರೆಯದೇ ಇತಿಹಾಸ ನಿಮರ್ಿಸತ್ತೆ ಅನ್ನೋದ್ರಲ್ಲಿ ಬೇರೆ ಮಾತೇ ಇಲ್ಲಾ..

 ಸುನಾಮಿಯನ್ನ ನಾವೂ ನೋಡಿದ್ದೇವೇ ಅವರೂ ನೋಡಿದ್ದಾರೆ.. ಆದ್ರೆ ಪ್ರತಿಯೊಬ್ಬರೂ ನೋಡಿದ ರೀತಿನೇ ಬೇರೆ.. ಸಾವುನೋವುಗಳನ್ನ ತಗೊಂಡ ಥರಾನೇ ಬೇರೆ.. ಅಪ್ಕೋರ್ಸ್ ನಾವೇ ಬೇರೆ ಜಪಾನ್ ಅನ್ನೋ ಪುಟ್ಟ ದೇಶದಲ್ಲಿ ಮತ್ತೆ ಮತ್ತೆ ಸತ್ತರೂ ಜೀವಂತವಾಗುವ ಬದುಕಿನ ಶಕ್ತಿಯೇ ಬೇರೆ..!

ಮನೆ ಸಂಸಾರ ಸಂಪಾದನೆ ಕಡೆಗೆ ಕೆಲಸಾ ಇವಿಷ್ಟು ಕಳೆದೋದ್ರೆ ಸರ್ವಸ್ವಾನೂ ಹೋಯ್ತು ಅಂತೀವಿ.. ಅದಷ್ಟೂ ಕಳಕೋಬೇಕು ಅಂತಿಲ್ಲಾ ಅದರಲ್ಲಿ ಯಾವುದೋ ಒಂದು ಹೋದ್ರೂ ಸರ್ವಸ್ವಾನೇ ಹೋದ ಥರಾ ಅನ್ಸತ್ತೆ .. ಕಣ್ಣೀರು.. ಅದರಲ್ಲೂ ಹೆಣ್ಣುಮಕ್ಕಳಿಗೆ ಕಳಕೊಳ್ಳೋದಕ್ಕೆ ಶೀಲ ಅನ್ನೋ ಇನ್ನೊಂದು ಬುಲ್ಶಿಟ್..! ಒಟ್ಟಲ್ಲಿ ಬರೋ ಸಣ್ಣ ಪುಟ್ಟ ದುಃಖಗಳೂ ನಮಗೆ ದೊಡ್ಡದಾಗಿ ಕಾಣಿಸತ್ವೆ.. ನಾವು ಬದುಕಿದ್ದೇವೆ ಅಂದ್ರೆ ನಮ್ಮ ಪಯಣ ಮುಗಿದಿಲ್ಲಾ ಅನ್ನೋದೇ ಮರೆತುಹೋಗತ್ತೆ.. ಆದ್ರೆ ನಾನೇ ಇಲ್ಲಿರೋವಾಗ ನನ್ನ ಹೊರತಾಗಿ ಎಲ್ಲವನ್ನೂ ಅದ್ಹೇಗೆ ಸರ್ವಸ್ವ ಅನ್ನೋದಕ್ಕಾಗತ್ತೆ..? ಇಂಥದ್ದೊಂದು ಪ್ರಶ್ನೆ ನನಗೆ ಎದ್ದಿದ್ದು ಒಬ್ಬ ಜಪಾನಿಗನ ಈ ಮಾತಿಂದ " ಭೂಕಂಪ ಬೂಮಿಯನ್ನ ಅಲ್ಲಾಡಿಸಬಹುದು ಬದುಕೋ ಉತ್ಸಾಹವನ್ನಲ್ಲಾ.. ಸುನಾಮಿ ಸುತ್ತಲೂ ಇರುವುದನ್ನ ಕೊಚ್ಚಿಕೊಂಡು ಹೋಗಿರಬಹುದು ಆದ್ರೆ ಬದುಕೋ ಛಲವನ್ನಲ್ಲಾ.. ನಮ್ಮ ಊರನ್ನ ನಾವು ಮತ್ತೆ ಕಟ್ಟಿಕೊಳ್ಳೋಣಾ" ಅವನ ಹಾಗೆ, ಕಳೆದುಕೊಂಡ ದುಃಖಕ್ಕಿಂತ ಯಾರ್ಯಾರೋ ನಮ್ಮವರಾಗಿ ಎಲ್ಲರೂ ಒಂದಾಗಿ ಕಟ್ಟುವ ಖುಶಿ ದೊಡ್ಡದು ಅಂತ ನಮಗ್ಯಾಕೆ ಅನ್ನಿಸಲ್ಲಾ..?

ಸುನಾಮಿ ಅರೆಬರೆ ನೆಲಸಮ ಮಾಡಿದ ಜಪಾನಿನ ಉರೊಂದರಲ್ಲಿ,ಅಳಿದು ಉಳಿದ ಅಂಗಡಿಯ ಮುಂಗಟ್ಟಿನ ಮೇಲೆ ಯಾರೋ ಬಂದು ನಮ್ಮ ಊರನ್ನ ಮತ್ತೆ ಕಟ್ತಾರೆ ಅಂತ ಕಾಯೋದಕ್ಕಿಂತ ನಾವೇ ಅದನ್ನ ಮತ್ತೆ ನಿರ್ಮಿಸೋಣ.. ಇನ್ನಷ್ಟು ಚಂದವಾಗಿ.. ಆ ಸುನಾಮಿಯಂತ ಸುನಾಮಿನೇ ನಾಚುವ ಹಾಗೆ ಅಂತ ಬರೆದಿದ್ನಂತೆ..  ದುಃಖ ಉಮ್ಮಳಿಸಿದಾಗ ಭಗವದ್ಗೀತೆಯನ್ನ ಹಿಡಿದು ಅದರ ಯಾವ ಸಾಲುಗಳನ್ನೂ ಸರಿಯಾಗಿ ಅಥರ್ೈಸಿಕೊಳ್ಳದೆ ಮತ್ತೆ ಹುಟ್ಟಿಬರೋ ಕೃಷ್ಣನಿಗಾಗಿ ಕಾಯ್ತೀವಲ್ಲಾ ನಾವು...! ನಮ್ಮನ್ನ ಆ ಜಪಾನಿಗರಿಗೆ ಹೋಲಿಸಿಕೊಳ್ಳೋದಕ್ಕಾದ್ರೂ ಆಗತ್ತಾ..?

ಆ ಪುಟ್ಟ ದೇಶಕ್ಕೆ ಅದೆಷ್ಟು ಶಕ್ತಿ ಇದೆಯೋ ಏನೋ ನೋಡಿ.. ಮೊದಲು ಭೂಕಂಪ ನಂತರ ಸುನಾಮಿ ಆನಂತರ ಹಿಮಪಾತ ಅಷ್ಟಾದ್ಮೇಲೆ ನ್ಯೂಕ್ಲಿಯರ್ ರಿಯಾಕ್ಟರ್ಗಳ ಸ್ಫೋಟ್.. ಒಂದರ ನಂತ್ರಾ ಒಂದು ಸುಲಭವಾಗಿ ಭರಿಸಲಾಗದ ದುರಂತಗಳೆ.. ಆದ್ರೂ ಜಪಾನ್ ಭರಿಸತ್ತೆ.. ಹಾಗಂತ ಇಕನಾಮಿಕಲಿ ಜಪಾನ್ ತೀರಾನೇ ಬಲಿಷ್ಠವಾಗಿಯೇನೂ ಉಳಿದಿಲ್ಲಾ.. ರಾಜಕೀಯದ ರಗಳೆಗಳು ಅಲ್ಲೂ ಇವೆ.. ಅಧಿಕಾರಿಗಳ ಕೈಗೆ ಭ್ರಷ್ಠಾಚಾರದ ಕೊಳೆ ಅಂಟಿದೆ.. ಅದೆಲ್ಲದರ ನಡುವೆನೂ ಜಪಾನಿಗ ಸೋತಿಲ್ಲಾ.. ದೇಶದ ಮೇಲಿನ ಪ್ರೀತಿ ಕಡಿಮೆ ಆಗಿಲ್ಲಾ.. ಒಬ್ಬನೇ ಒಬ್ಬ ನಾನ್ಯಾಕಾದ್ರೂ ಈ ದೇಶದಲ್ಲಿ ಹುಟ್ಟಿದ್ನಪ್ಪಾ ಅಂತ ಕೊರಗಿದವನು ಕಾಣಿಸ್ಲಿಲ್ಲಾ..! ನಮ್ಮಲ್ಲಿ ಯಾಕಾದ್ರೂ ಹುಡುಗಿಯಾಗಿ ಹುಟ್ಟಿದ್ನಪ್ಪಾ ಅನ್ನೋದ್ರಿಂದ ನೋವು ಶುರುವಾಗ್ಬಿಡತ್ತೆ.. ಯಾಕ್ ಹೀಗೆ..?

ನಾವು ಹೋರಾಡಿ ಸ್ವಾತಂತ್ರ್ಯಗಳಿಸಿಕೊಂಡು ಸ್ವಲ್ಪ ಹೆಚ್ಚು ಕಡಿಮೆ ಜಪಾನಿನ ಮೆಲೆ ಅಣುಬಾಂಬ್ ದಾಳಿಯಾದಷ್ಟೇ ವರ್ಷಗಳಾಗಿವೆ.... ನಾವು ಬ್ರಿಟೀಶರು ಕೊಳ್ಳೆ ಹೊಡೆದ ನಂತರ ಅಳಿದುಳಿದ ಸಂಪತ್ತುಗಳಲ್ಲಿ ಸುಂದರ ದೇಶವನ್ನ ಕಟ್ಟಬೇಕಿದೆ ಅಂತ ನೋವಿನಲ್ಲಿ ಮಾತಾಡಿದ್ವಿ.. ಬೂದಿಯಾದ ಜಪಾನು.. ಉಸಿರೇ ಇಲ್ಲದ ಅರೆಜೀವಗಳನ್ನ ಇಟ್ಕೊಂಡು , ಬಸಿರಿನಲ್ಲೂ ಬರಸಿಡಿಲನ್ನ ಹೊತ್ಕೊಂಡು ಸಮಸ್ತ ವಿಶ್ವವೂ ಬೆರಗಾಗೋ ಥರಾ ಮೈ ಕೊಡವಿ ಎದ್ದದ್ದು ನಮಗ್ಯಾಕೆ ಕಾಣಿಸಲಿಲ್ಲಾ..?

ಬದಲಾವಣೆ ಅನ್ನೋದು ದಿಡೀರ್ ಅಂತ ಆಗ್ಬಿಡಲ್ಲಾ.. ಅದಕ್ಕೆ ಟೈಮ್ ಬೇಕು..? ಎಷ್ಟು ಬೇಕು ತಿಂಗಳು.. ಉಹು .. ವರ್ಷ.. ಉಹು ಹತ್ತು ವರ್ಷ...! ಅದೆಷ್ಟು ಪಂಚವಾಷರ್ಿಕ ಯೋಜನೆಗಳು ನಮ್ಮಲ್ಲಿ ಯೋಜನೆಯಾಗೇ ಉಳಿದಿಲ್ಲಾ ಹೇಳಿ.. ? ಜಪಾನಿನ ಬಹುಭಾಗವನ್ನ ಸುನಾಮಿ ನುಂಗ್ಹಾಕಿ ತಿಂಗಳು ಕಳೆದಿಲ್ಲಾ ಆಗ್ಲೇ ಕಣ್ಣಲ್ಲಿ ಆಶ್ಚರ್ಯದ ಬೆಳಕು ಮೂಡುವಷ್ಟು ಬದಲಾವಣೆ ಆಗಿದೆ.. ಇದೇನಾ ಷಾ0ಡಾಯ್..? ಇದೇನಾ ಷಿಯಾಗಾಮ್..? ಅಂಥ ಗುರುತಿಸಲಾಗದ ಬದಲಾವಣೆಗಳು ಆ ವೇಗದಲ್ಲಿ ಯಾವತ್ತಾದ್ರೂ ನಮ್ಮಲ್ಲಾಗಿವೆಯಾ..?

ಆಗಲ್ಲಾರಿ ಜಪಾನಿಗೆ, ಜಪಾನಿಗರಿಗೆ ನಮ್ಮನ್ನ ನಾವು ಹೋಲಿಸಿಕೊಳ್ಳೋದಕ್ಕೇ ಆಗಲ್ಲಾ.. ಅಲ್ಲಿ ಆದಷ್ಟು ದುರಂತಗಳು ಎಲ್ಲೂ ಆಗಿಲ್ವೇನೋ.. ಆದ್ರೆ ಎಲ್ಲವೂ ಪ್ರಕೃತಿ ಸೃಷ್ಟಿಸಿದ್ದು ಪರರು ಸೃಷ್ಟಿಸಿದ್ದು.. ಇಷ್ಟು ದೊಡ್ಡ ಸುನಾಮಿಯಾಗಿ ಚೆಲ್ಲಾಪಿಲ್ಲಿಯಾಗಿಸಿಹೋದಾಗ್ಲೂ ಸಿಕ್ಕಿದ್ದನ್ನ ಬರಗಿದ ಜನರಿಲ್ಲಾ.. ಕದ್ದ ಒ0ದೇ ಒಂದು ಕೇಸಿಲ್ಲಾ.. ಇನ್ನು ಅತ್ಯಾಚಾರ ಕೊಲೆಗಳೆಲ್ಲಾ ಒತ್ತಟ್ಟಿಗಿರ್ಲಿ.. ನಿರಾಶ್ರಿತ ಶಿಭಿರಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಕೂತ ಜನಾ ಕೂಡಾ ಬದುಕಿಗಲ್ಲಾ ಕಡೆಗೆ ಯಾರಿಂದಲೂ ಸಹಿಸಲಾಗದ ಹಸಿವಿಗೂ ಹೆದರಲಿಲ್ಲಾ.. ಅಲ್ಲಿ ಊಟದ ಪೊಟ್ಟಣಕ್ಕೆ ನೂಕು ನುಗ್ಗಲಾಗಲಿಲ್ಲಾ.. ಆದ್ರೆ ನಮ್ಮ ದೇಶದಲ್ಲಿ ಇದನ್ನ ಉಹಿಸೋದಕ್ಕಾದ್ರೂ ಆಗತ್ತಾ..? ದುಡಿವ ಸಂಪಾದನೆ ಬದುಕೋದಕ್ಕೆ ಸಾಕಾಗಲ್ಲಾ ಅಂತ ಕಳ್ಳತನಕ್ಕಿಳಿಯೋರು,  ಐಶಾರಾಮಿಯಾಗಿ ಬದುಕಬೇಕು ಅಂತ ಮರ್ಡರ್ ಮಾಡೋರು, ಹಿಡಿ ಜಾಗಕ್ಕಾಗಿ ಹುಟ್ಟಿನೊಂದಿಗೆ ಬಂದ ಸಂಬಂಧವನ್ನೇ ಮರೆಯೋ ಜನರೇ ಹೆಚ್ಚಿರೋ ನಮ್ಮ ದೇಶಕ್ಕೆ ಜಪಾನ್ ಹೋಲಿಕೆ ಆಗತ್ತಾ..?

ದೊಡ್ಡ ಗೊಂದಲ ಎದ್ದಿದೆ.. ಯಾಕೆ ನಾವು ಹಾಗಿಲ್ಲಾ..? ನಮ್ಮಲ್ಲೇಕೆ ಜಪಾನಿಗರಂತಾ ಸ್ವಾಭಿಮಾನವಿಲ್ಲಾ..? ಬದುಕುವ ಶಕ್ತಿ ಇಲ್ಲಾ..?  ದೇಶಭಕ್ತಿ ಇಲ್ಲಾ ? ಛಲವಿಲ್ಲಾ ? ಬಲವಿಲ್ಲಾ..? ಕಿಚ್ಚಿಲ್ಲಾ..? ಕನಸಿಲ್ಲಾ..? ಮನಸಿಲ್ಲಾ..? ನಾವು ಅವರಂತಾಗಲು ಸಾಧ್ಯವೇ ಇಲ್ವಾ..? ಸಮಸ್ಯೆ ಎಲ್ಲಿದೆ..? ಹುಟ್ಟಿದ ನೆಲದಲ್ಲಿದ್ಯಾ..? ಬೆಳೆದ ಪರಿಸರದಲ್ಲಿದ್ಯಾ..? ಉಸಿರಾಡೋ ಗಾಳಿಯಲ್ಲಿದ್ಯಾ..? ತಿನ್ನೋ ಅನ್ನದಲ್ಲಿದ್ಯಾ ? ಕಲಿವ ಪಾಠದಲ್ಲಿದ್ಯಾ ? ಎಲ್ಲೂ ಇಲ್ಲಾ ನಮ್ಮಲ್ಲಿದೆ.. ನಮ್ಮ ಯೋಚನಾ ಶಕ್ತಿಯಲ್ಲಿದೆ ಅಂತ ಅಂದುಬಿಡಬಹುದು.. ಹಾಗಾದ್ರೆ ನಮ್ಮ ಯೋಚನೆಗಳಲ್ಲೂ ಯಾಕಿಂತ ಅಧಃಪತನ..? ನಮ್ಮಲ್ಲಿರೋ ಸಮಸ್ಯೆಗೆ ಕಾರಣ ಹುಡುಕಬೆಕಾ..? ನಾವು ಬದಲಾಗುವ ದಾರಿ ಕಂಡುಕೊಳ್ಳಬೇಕಾ..? ಒಂದಕ್ಕೊಂದು ನಾಣ್ಯದ ಎರಡುಮುಖಗಳು.. ಒಟ್ಟಲ್ಲಿ ಬದಲಾವಣೆ ಬೇಕೇ ಬೇಕು.. ಜಪಾನ್ ಆದರ್ಶವಾದರೆ ಸಾಕು..!
 

Friday, April 8, 2011

ಹಜಾರೆ ಆಜಾರೆ..!!

ಸಾಗಬಹುದು, ಒಂದಲ್ಲಾ ಎರಡಲ್ಲಾ ಮೈಯ್ಯಲ್ಲಿರೋ ಬಲವೆಲ್ಲಾ ನೀರಾಗೋ ವರೆಗೂ ನಡೀಬಹುದು.. ಆದ್ರೆ ದಾರಿ ಬೇಕು.. ದಾರಿದೀಪ ಬೇಕು..ಮನಸನ್ನ ಕನಸನ್ನ ಕಡೆಗೆ ನಮ್ಮನ್ನ ನಡೆಸೋ ಶಕ್ತಿ ಬೇಕು.. ಅವರನ್ನೇ ಅಲ್ವಾ ಲೀಡರ್ ಅನ್ನೋದು.. ಅವನೇ ಅಲ್ವಾ ನಿಜವಾದ ನಾಯಕ.. ಅವರೇ ಅಲ್ವಾ ಅಣ್ಣಾ ಹಜಾರೆ..

ಈಗ ಜನ್ಲೋಕ್ಪಾಲ್ ಆಂದೋಲನಾನೇ ತಗೋಳಿ.. ಭ್ರಷ್ಟರ ನಿರ್ಮೂಲನೆಗೆ ಅಣ್ಣಾ ಹಜಾರೆಯವರು ಶುರು ಮಾಡಿದ ಹೋರಾಟಾನೇ ತಗೋಳಿ..ನಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಾ ಇದೆ ಅಂತ ಯಾರಿಗೆ ಗೊತ್ತಿಲ್ಲಾ..? ಅದೆಷ್ಟು ಜನಾ ಅದರಿಂದ ಸಫರ್ ಆಗಿಲ್ಲಾ..! ಬ್ಯುರೋಕ್ರಸಿ ಅನ್ನೋದು ಬೇರೆ ದೇಶಗಳಲ್ಲೆಲ್ಲಾ ಬಗಲಲ್ಲಿರಬಹುದು, ಹೆಗಲಲ್ಲಿರಬಹುದು, ಆದ್ರೆ ನಮ್ಮಲ್ಲಿ ಬುಡದಲ್ಲಿದೆ.. ಉಸಿರಾಡೋ ಗಾಳಿಯಲ್ಲಿದೆ.. ಕುಡಿಯೋ ನೀರಲ್ಲಿದೆ.. ಇಡೀ ಜಗತ್ತಿನ ಕಪ್ಪು ಹಣ ಸೇರಿಸಿದರೆ ನಮ್ಮ ದೇಶದಲ್ಲಿರೋಷ್ಟು ಆಗತ್ತಂತೆ.. ಅಂದ್ರೆ ಹೇಗಿದೆ ಲೆಕ್ಕಾ ಹಾಕಿ..!

 ಇವತ್ತು ನೂರಕ್ಕೆ ಹದಿನೈದು ಜನ ಲಂಚ ಕೊಟ್ಟು ಕೆಲಸಕ್ಕೆ ಸೇರ್ಕೋತಿದಾರೆ.. ಅವರಂತೂ ಸಂಬಳಕ್ಕೆ ನಿಷ್ಠರಾಗಿರೋ ಚಾನ್ಸು ತುಂಬಾ ಕಡಿಮೆ..  ಅವರ ಜೊತೆಗೆ ಹಣಾ ತಗೊಳೋದೇ ಹವ್ಯಾಸವಾಗಿಸಿಕೊಂಡವರು, ಕೊಳ್ಳೆ ಹೊಡೆಯೋದನ್ನೇ ಕೆಲಸವಾಗಿಸಿಕೊಂಡವರು, ಸಾಲದ ಸಂಬಳಕ್ಕೆ ಗಿಂಬಳಾ ಸೇರಿಸಿ ಸಂಸಾರ ನಡೆಸೋರು.. ಎಷ್ಟು ಬೇಕು..? ಭ್ರಷ್ಟರ ದೊಡ್ಡ ದಂಡೇ ಇದೆ.. ಇವರ ನಡುವೆ ನಿಯತ್ತು ಅಂದ್ರೆ ಮನೆಲಿರೋ ನಾಯಿನೂ ನಗತ್ತೆ.. ಇದು ನಮ್ಮ ಪರಿಸ್ಥಿತಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ..

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಹಂತದಲ್ಲಿ ಭ್ರಷ್ಟಾಚಾರ ಕಾಣಿಸಿದೆ.. ಅನುಭವವಾಗಿದೆ.. ಅಬ್ಬಬ್ಬಾ ಅನ್ಸಿ ಬರ್ಜರಿ ಬಾಯ್ ಮಾಡಿದ್ದೂ ಇದೆ.. ಮನೆಯವರೆಲ್ಲಾ ಕೂತು ಹರಟೋವಾಗ, ಸ್ನೇಹಿತರ ಜೊತೆ ಟೈಮ್ ಪಾಸ್ ಮಾಡೋವಾಗ ಕಡೆಗೆ ಚಾನಲ್ಗಳ ಪ್ಯಾನಲ್ ಡಿಸ್ಕಶನ್ನಲ್ಲಿ ಕೂತು ಅಬ್ಬರವಿಟ್ಟಿದ್ದೂ ಇದೆ.. ಆದ್ರೆ ನನ್ನನ್ನೂ ಸೇರಿ ಒಬ್ಬೇ ಒಬ್ಬ ಅದರ ನಿರ್ಮೂಲನೆಯ ಪಣ ತೊಟ್ಟು ಹೋರಾಟಕ್ಕೆ ನಿಲ್ಲೋ ಮನಸು ಮಾಡಿದ್ವಾ..? ಇಲ್ಲಾ..! ಕಳ್ಳರ ಸಂತೆಯಲ್ಲಿ ನಿಂತು ಒಬ್ಬ ಕೂಗಿದ್ರೆ ಯಾರಿಗೆ ಕೇಳಬೇಕು..? ಇನ್ನಷ್ಟು ಮತ್ತಷ್ಟು ದನಿಗಳು ಕೂಡಿಕೊಳ್ಳತ್ವೆ ಅನ್ನೋ ಭರವಸೆ ಆದ್ರೂ ಉಂಟೇ..? ಊಹು, ಇದೆಲ್ಲಾ ನಮ್ಮಿಂದಾಗದ ಮಾತು.. ಭ್ರಷ್ಟಾಚಾರ ಅನ್ನೋದು ನಮ್ಮದೇಶದಲ್ಲಿ ಬಡಿದೊಡೆಯೋದಕ್ಕಾಗದ ಪಿಡುಗು ಅಂತ ನಿರ್ದರಿಸಿದವರೇ ಜಾಸ್ತಿ..

ಆದ್ರೆ ಅಣ್ಣಾಜಿ.. ಅವರೊಬ್ಬರು ಹಾಗ್ ಅಂದ್ಕೊಳ್ಳಿಲ್ಲಾ.. ಭ್ರಷ್ಟಾಚಾರ ನಿರ್ಮೂಲನೆಗೆ ಅದೆಂಥಾ ಹೋರಾಟ ಮಾಡಿಬಿಟ್ರು ಅಲ್ವಾ..? ನ್ಯಾಯಮೂತರ್ಿ ಸಂತೋಶ್ ಹೆಗಡೆ ಪ್ರಶಾಂತ್ ಭೂಷಣ್ ಇವರೆಲ್ಲಾ ಸೇರಿ ಹಾಕಿದ ಡ್ರಾಪ್ಟನ್ನ ಪಾಸ್ ಮಾಡಿಸ್ಲೇಬೇಕು ಅಂತ ಬೇತಾಳನಂತೆ ಬೆನ್ನತ್ತಿಬಿಟ್ರು . ಅದರ ಫಲಾನೇ ಉಪವಾಸ ಸತ್ಯಾಗ್ರಹ..


ಅವರು ಬನ್ನಿ ಹೋರಾಡೋಣ ಅಂತ ಜನರನ್ನ ಕರೀಲಿಲ್ಲಾ..  ಇದು ನನಗೊಬ್ಬನಿಗೇ ಬೇಕಾಗಿರೋದಲ್ಲಾ, ನನ್ನೊಬ್ಬನಿಂದ ಆಗೋದೂ ಅಲ್ಲಾ ಅಂತೆಲ್ಲಾ ಯೋಚಿಸಲೂ ಇಲ್ಲಾ.. ಜಂತರ್ ಮಂತರ್ನಲ್ಲಿ ಕುಳಿತುಬಿಟ್ರು.. ಜೀವಾ ಹೋದರೂ ಸರಿ ಭ್ರಷ್ಟರಿಗೆ ಮೂಗುದಾರ ಹಾಕೋ ವ್ಯವಸ್ಥೆ ಆಗಲೇಬೇಕು ಅಂತ ನಿರ್ದರಿಸಿಬಿಟ್ರು.. ಅಷ್ಟೆ, ಒಳಗೊಳಗೇ ಕುದಿಯುತ್ತಿದ್ದ ಅದೆಷ್ಟು ಜನ ಎದ್ದು ನಿಂತ್ರು ನೋಡಿ.. ಒಬ್ಬ ಅಣ್ಣನ ಬೆನ್ನಿಗೆ ಕೋಟ್ಯಾಂತರ ಜನ..!

ಒ0ದು ಎರಡು ಮೂರು ನಾಲ್ಕು ದಿನಗಳು ಉರುಳ್ತಾನೇ ಇವೆ.. .. ಬೆಂಬಲಿಸೋ ಜನರೂ  ಹೆಚ್ಚಾದ್ರು.. ಆದ್ರೆ ಒಕ್ಕೂರಲದ ಕೂಗನ್ನೂ ಕೇಳಿಸಿಕೊಳ್ಳೋದಕ್ಕೆ ಸಿದ್ಧರಿಲ್ಲದ ಹುಂಬರಂತೆ ಖುರ್ಚಿಯನ್ನ ಗಟ್ಟಿಯಾಗಿ ಹಿಡಿದಪ್ಪಿ ಕುಳಿತವರು, ನಾವು ಆರಿಸಿ ಕಳಿಸಿದ ನಾಯಕರು.. ಇಂಥವರಿಗೆಲ್ಲಾ ನಮ್ಮ ನೇತಾರರು ಅನ್ನೋದಕ್ಕೆ ಅಸಹ್ಯವಾಗತ್ತೆ.. ನಮ್ಮದು ಪ್ರಜಾ ಪ್ರಭುತ್ವ  ವ್ಯವಸ್ಥೆ ಅನ್ನೋ ಸಂವಿಧಾನದ ವಾಕ್ಯದ ಬಗ್ಗೆ ಜಿಗುಪ್ಸೆ ಬರತ್ತೆ..! ಈ ಜನನಾಯಕರಿಗೆ ಜನರ ಪಾಲನೆಗೊಂದು ಸರಿಯಾದ ಮಸೂದೆಯನ್ನ ತರೋದಕ್ಕಾಗಲ್ಲಾ ಅನ್ನೋದಾದ್ರೆ , ಇವರ್ಯಾಕೆ ಬೇಕು..? ಓಟು ಹಾಕಿ ಗೆಲಿಸಿದವರನ್ನ ಬೂಟು ಕಾಲಲ್ಲಿ ಒದೆಯೋ ಹಾಳು ಸಂಸ್ಕ್ರುತಿ ಯಾಕಿರಬೇಕು...?

"ಇರಬಾರದು.. ನಿಮ್ಮ ಹೋರಾಟ ಸರಿಯಾಗಿದೆ.. ಭ್ರಷ್ಟರನ್ನ ಬಗ್ಗು ಬಡಿಯೋದಕ್ಕೆ ಒಂದು ಸರಿಯಾದ ಸಮಿತಿ ಆಗಲೇಬೇಕು.. ಕಾನೂನು ಬರಲೇಬೇಕು.. ನಾವು ಅಣ್ಣಾಜಿಗೆ ಸಪೋರ್ಟ್ ಮಾಡ್ತೀವಿ ಅಂತ ನಮ್ಮ ಮುಖ್ಯಮಂತ್ರಿಗಳು ಹೇಳಿದ್ದು ತಮಾಷೆ..! ಎಷ್ಟಂದ್ರೂ ಹಿರಿಯ ರಾಜಕಾರಣಿ ನೋಡಿ.. ಅವರ ಕಣ್ಣಿಗೆ ಕೋಟ್ಯಾಂತರ ಓಟುಗಳು ಕಾಣಿಸುತ್ವೆ..ಜನಸಾಮಾನ್ಯರ ಮನಸು ಕಾಣಿಸತ್ತೆ.. ಮುಂದೆ ಬರೋ ಇಲೆಕ್ಷನ್ನಿಗೊಂದಿಷ್ಟು ತಯಾರಿ ಆಗಲೇಬೇಕಲ್ವಾ..?

ಬರೀ ಓಟಿನ ರಾಜಕೀಯ ಮಾಡೋ ಈ ಜನನಾಯಕರ ಕೈಗೆ ಆಡಳಿತದ ಚುಕ್ಕಾಣಿಯನ್ನೇನೋ ಕೊಟ್ಟಾಗಿದೆ.. ಆದ್ರೆ ನಮ್ಮೆಲ್ಲರ ಬದುಕನ್ನ ಕೊಟ್ಟಿಲ್ವಲ್ಲಾ ,ದನಿಯನ್ನ ಕೊಟ್ಟಿಲ್ವಲ್ಲಾ.. ನಾವು ನಮಗೆ ಸ್ವಂತ.. ನಮ್ಮ ದೇಶ ನಮಗೆಲ್ಲರಿಗೂ ಅಂತ... ಕೋಟಿ ಕೋಟಿ ಲೂಟಿಯಾಗೋದನ್ನ ತಡೆಯೋದಕ್ಕೆ ಆಗತ್ತೋ ಇಲ್ವೋ.. ಕಳೆದುಕೊಂಡಿರೋದು ಮರಳಿ ಸಿಗತ್ತೋ ಇಲ್ವೋ..ಆದ್ರೆ ಇನ್ಮುಂದೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ಪ್ರಯತ್ನ ಆದ್ರೂ ನಡೀಬೇಕು.. ಜನಜಾಗೃತಿ ಮೂಡಿಸಿದ ಪ್ರತಿಯೊಬ್ಬರಿಗೂ ಅದರಲ್ಲೂ ವಿಷೇಶವಾಗಿ  ಹಜಾರೆ ಅಣ್ಣನವರಿಗೆ ಹಜಾರು ನಮಸ್ಕಾರ..  ಇದು ಮನೆ ಮನೆಯಲ್ಲೂ ಅಣ್ಣಾ ಹಜಾರೆ ಹುಟ್ಟಬೇಕಾದ ಸಮಯ.. ಬನ್ನಿ ಕೈ ಜೋಡಿಸಿ ..ಸಾಗರೋಪಾದಿಯಾಗಿ ಸೇರೋಣಾ... ಭ್ರಷ್ಟರ ಬೆನ್ನತ್ತೋಣಾ..!

Sunday, April 3, 2011

ಆದಿ ಅಂತ್ಯದ ನಡುವೆ..!




ಸುಂದರ ಮುಂಜಾವು
ಸಣ್ಣಗೆ ಚಳಿ
ಸರಿದಾಡಿದ ತಿಳಿ ಗಾಳಿ
ಮೂಡಣದಲಿ ರಂಗವಲ್ಲಿ
ಬಣ್ಣದೋಕುಳಿ ಚೆಲ್ಲಿ
ಬಂದಿದೆ ಅಂದದಲಿ
 ಚಂದವಿದೆ ಶ್ರೀಖರದಲ್ಲಿ

ಅಡಿಗಡಿಗೂ ಅರಿವಿರಲಿ
ನಡೆಯಲ್ಲಿ ನಲಿವಿರಲಿ
ನುಡಿಯ ನಗಾರಿಯಲಿ ನೈಜವಿರಲಿ
ಜೀವಜಾತೆಗೆ ನಮಿಸಿ
ಭಾವ ದೀವಿಗೆ ಇರಿಸಿ
ಕರಮುಗಿದು ಕರೆವ ಮನ ನಮಗಿರಲಿ

ಬೇವಿನೆಲೆಯನು ಜಗಿದು
ಜೀವೆಸೆಲೆಯನು ಬಗೆದು
ಬಂದಾಗ ಬದುಕಿನಲಿ
ಸಿಹಿಯ ಅಲೆಯು
ಹಸಿರ ಹಾಸಿಗೆ
ಮುಗಿವ ಬೇಸಿಗೆ
ಬದುಕ ಹಾದಿಯಲಿ ಬೆಸುಗೆ

ಚಿಮ್ಮಿದೆ ಜೀವ ಜಲ
ಬಂದಿದೆ ಭೀಮ ಬಲ
ಹೊತ್ತುಮುಳುಗುವ ಮುನ್ನ
ಹತ್ತಿ ಉರಯವುದೆನ್ನ
ಚಿತ್ತ ಚಾಂಚಲ್ಯದ ಚಂದ್ರಬಿಂಬ
ಕತ್ತೆತ್ತಿದರೆ ಕಲೆಯು
ಉತ್ತು ಬಿತ್ತಿದ ಛಲವು
ಚಿತ್ತಾರದಲಿ ಮೂಡಿದೆ ಬದುಕಿನಲೆಯು..

ಖರದಲಿದೆ ಗಡಸು
ಕಡಲಲಿದೆ ಮುನಿಸು
ಒಡಲಾಳದಲಿ ಕಡೆವ ಭಿರುಸು
ಮಾಡುವುದು ಮುಗಿದಿಲ್ಲ
ಆಡುವುದು ಅಡಗಿಲ್ಲ
ಕಣ್ಣಾಲೆಗಳಲಿ ಕನಸು ಬತ್ತದಿರಲಿ

ಬಂದಂತೆ ಬರಲಿ
ಆದಿ ಅಂತ್ಯವು ಇರಲಿ
ಉಶೆ ಸರಿದು ನಿಶೆ ಜಾರಿ
ಅಂದಗಾರನ ಕೊರಳೊಳಗೆ ಕುಣಿದಾಡಿ
ಕೆಂದಾವರೆಯ ಕರದಲಿ
ಅರಳಲಿ ಹರುಷ
ಮರಳಿ ಮರಳಿ ಬರಲಿ ವರುಷ

 

Friday, April 1, 2011

ಕ್ರಿಕೆಟ್ ಮೇನಿಯ..!





ಚಿಕ್ಕದೊಂದು ಗಾಲಿ ಚೇರು.. ಅದರಲ್ಲಿ ಬೆಚ್ಚಗೆ ಕೂತು ಬಾಯಲ್ಲಿಟ್ಟ ನಿಪ್ಪಲ್ಲನ್ನ ಮತ್ತೆ ಮತ್ತೆ ಚಪ್ಪರಿಸೋ ಎಳಸು ಕಂದ.. ಆ ಪುಟ್ಟ ಕೈಲಿ ಅಮ್ಮನ ಕೈ ಬೆರಳಿಡ್ಕೋಬಹುದು ಅಷ್ಟೆ.. ಆಗ್ಲೇ ಮಗುವಿನ ಸುತ್ತಮುತ್ತ ಬ್ಯಾಟು ಬಾಲು ಇಟ್ಟಾಗಿದೆ.. ಕ್ರೇಜಿ ಪೀಪಲ್ ಅಂದ್ಕೊಂಡು ಕಚೇರಿಯ ಒಳಗೆ ಬಂದೆ..

ನಮ್ಮ ಆಫೀಸಲ್ಲಿ ಅವತ್ತು  ಬರೀ ಬ್ಲ್ಯೂ ಬ್ಲ್ಯೂ ಬ್ಲ್ಯೂ..  ಬ್ಲಡ್ ಬ್ಲ್ಯೂ..! ಕ್ರಿಕೇಟ್ ಹಬ್ಬ.. ಮೇಕಪ್ ಮ್ಯಾನ್ ಕೈಲಿ ಕೇಸರಿ ಬಿಳಿ ಹಸಿರು ಜೊತೆಗೆ ನೀಲಿ ಬಣ್ಣದ ಬ್ರೆಶ್.. ಮೇಕಪ್ ರೂಮಲ್ಲಿ ಜಾಗಾಸಾಕಾಗಿಲ್ಲಾ .. ಕಾನ್ಫರೆನ್ಸ್ ರೂಮಲ್ಲಿ ದೊಡ್ಡ ಸಾಲು.. ಒಬ್ರು ಗಲ್ಲಾ ಮುಂದ್ಮಾಡ್ತಾರೆ, ಇನ್ನೊಬ್ಬರು ಹಣೆ.. ಕಡೆಗೆ ಇಡೀ ಮುಖಾ ಕೊಟ್ಟು ಕೂತವ್ರೂ ಇದ್ದಾರೆ.. ಎಲ್ಲರ ಮುಖದ ಮೇಲೂ ಚಿತ್ರ ವಿಚಿತ್ರ..! ಹ್ಯಾಟು ಬೂಟು ಬಿಟ್ಟು, ಬ್ಯಾಟು ಬಾಲು , ಕಡೆಗೆ ವಲ್ಡ್ ಕಪ್ಪೂ ಮುಖದ ಮೇಲೆ ರಾರಾಜಿಸಿಬಿಟ್ತು.. ಒಟ್ಟಲ್ಲಿ ರಂಗೇರಿದ ವಾತಾವರಣ.. ರಂಗ್ ಭರಾ ದಿಲ್..! ನನಗೊಂದಿಷ್ಟು ಮಾಡಲೇಬೇಕಾದ ಕೆಲಸಾ ಇರ್ಲಿಲ್ಲಾ ಅಂದ್ರೆ ನಾನೂ ಅವರೊಟ್ಟಿಗೆ ಇರ್ತಿದ್ನೇನೋ.. ಬಟ್ ಐ ವಾಸ್ ಹೆಲ್ಪ್ಲೆಸ್..! ಆ ಜೋಶ್ನ ಗದ್ದಲ ಗಡಿ ದಾಟೋ ಮೊದ್ಲು ನನಗೆ ಕೆಲಸಾ ಮುಗಿಸ್ಕೋಬೇಕಿತ್ತು.. ಹಂಗಾಗಿ ಸುತ್ತ ಹತ್ತು ಟಿ ವಿ ಗಳಲ್ಲಿ ಒಂದೇ ಸಮನೆ ಬ್ಯಾಟು ಬೀಸಿ , ಬ್ಯಾಂಡ್ ಬಜಾಯಿಸ್ತಾ ಇದ್ರೂ ಅತ್ತ ಗಮನ ಕೊಡ್ಲಿಲ್ಲಾ.. ಆದ್ರೆ ಮಾತು..! ಅದು ಬೇಡಾ ಅಂದ್ರೂ ಸೀದಾ ತೆಲೆಗೇ ಹೋಗತ್ತೆ.. ಇಂಡಿಯಾ ಪಾಕಿಸ್ತಾನ್ ಮ್ಯಾಚು ಅಂದ್ರೆ ಯಾವ ಯುದ್ಧಕ್ಕಿಂತ ಕಡಿಮೆ ಇಲ್ಲಾ..! ಇಟ್ಸ್ ಅ ರಿಯಲ್ ವಾರ್ ಅಂತ ಯಾರೋ ಒಬ್ಬ ಮೈಕ್ ಹಿಡ್ಕೊಂಡು ಮಾತಾಡ್ತಾ ಇದ್ದಾ.. ನನ್ನ ಯೋಚನೆ ಬೇಡಾ ಅಂದ್ರೂ ಅತ್ತ ಹೋಗೇ ಬಿಟ್ತು..? ಈಸ್ ದೆಟ್ ವಾರ್ ? ನನಗೇ ನಾನೇ ಕೇಳ್ಕೊಂಡೆ..




ಯೆಸ್ ಇಟ್ ಈಸ್..! ಶತ್ರು ರಾಷ್ಟ್ರಗಳ ನಡುವೆ ಅದೇನಾದ್ರೂ ವಾರೆ.. ಆದ್ರೆ ಯಾರಿಗಾದ್ರೂ ಯುದ್ಧವನ್ನ ಎಂಜಾಯ ಮಾಡೋದಕ್ಕಾಗತ್ತಾ..? ಸಿಕ್ಸು ಫೋರ್ಗಳಿಗೆ ಕೇಕೆ ಹಾಕ್ತೀವಿ.. ಎದುರಾಳಿಯ ವಿಕೇಟ್ ತೆಗೆದಾಗ ಕುಣಿದು ಕುಪ್ಪಳಿಸ್ತೀವಿ.. ಒಂದೊಂದು ಬಾಲಿಗೂ ಎಕ್ಸ್ಪ್ರೆಶನ್ನು, ಸರಿದಾಡೋ ಇಂಪ್ರೆಶನ್ನು.. ಜಸ್ಟ್ ಇಮ್ಯಾಜಿನ್ ಅ ರಿಯಲ್ ವಾರ್..! ಪಾಪಿ ಪಾಕಿಗಳು ಗಡಿಯಲ್ಲಿ ನುಸುಳಿ ಬಂದಾಗ ಬದುಕೋ ಆಸೆ ಬಿಟ್ಟು ಬಡಿದಾಡಿದ್ರಲ್ಲಾ ನಮ್ಮ ಕುಲಬಾಂಧವರು.. ಭಾರತ ಮಾತೆಯ ಧೀರ ಪುತ್ರರು ಅವರಿಗೂ ಕ್ರಿಕೇಟ್ ಪ್ಲೇಯರ್ಸ್ಗೂ ಹೋಲ್ಸೋದಕ್ಕಾಗತ್ತಾ..? ಎರಡೂ ಸೇರಿದರೆ ಹುಡುಗಾಟ ಆದೀತು..! ಆದ್ರೂ ಆಟದಲ್ಲಿ ಮತ್ತು ಕಾಟದಲ್ಲಿ ಸಿಮಿಲಾರಿಟಿ ಇದ್ದೇ ಇದೆ..  ಬಾಲು ಎಸೆಯೋವಾಗ ಸ್ಟೇಡಿಯಮ್  ತುಂಬಾ ಜನಾ.. ಜೋಶು ಗಲಾಟೆ.. ಬಾಂಬು ಎಸೆಯೋವಾಗ ದೇಶದ ತುಂಬಾ ಜನ.. ಭಯಾ.. ಆಗ್ಲೂ ಗಲಾಟೆ..

ಮಾಡು ಇಲ್ಲವೇ ಮಡಿ.. ನಿಜಕ್ಕೂ ಆಟಕ್ಕೆ ಮತ್ತು ಯುದ್ಧಕ್ಕೆ ಅದೆಷ್ಟು ಸಂಬಂಧ ಇದೆ ಅಲ್ವಾ..? ಎರಡೂ ಕಡೆಗೂ ವಿಕೇಟ್ ಹೋದ್ರೆ ಪಾಠ..! ಗೆದ್ದುಬಂದ್ರೆ ಬಂಪರ್ ಊಟ..! ಆದ್ರೆ ಆಟದಲ್ಲಿ ಮಾತ್ರ ಸಂತಸಕೂಟ ಮಾಡ್ಬಹುದು.. ಯುದ್ಧದಲ್ಲಿ ಗೆದ್ರೂ ಸೋತ್ಹಾಗೆ.. ಸತ್ತವರ ಸಮಾಧಿಯ ಮೇಲೆ ಸುಖ ನಿದ್ದೆಮಾಡೋ ಮನಸಾದ್ರೂ ಹೇಗೆ ಬರತ್ತೆ ? ಸಿಹಿ ತಿನ್ನೂ ಸ್ಥಿತಿ ಆದ್ರೂ ಎಲ್ಲಿ ಉಳಿಯತ್ತೆ ? ಇಲ್ಲಿ ಸೋಲು ಅನ್ನೋದು ಸಾವಿನ ಮನೆ.. ಗೆಲುವು ಅನ್ನೋದು ಸೂತಕದ ಚಿನ್ಹೆ ..

ಏನೇ ಅಂದ್ರೂ ಗೇಮ್ಲ್ಲಿ ವಾರ್ ಇದೆ.. ಕ್ರಿಕೇಟ್ ಅಂತಲ್ಲಾ, ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಂತಾನೂ ಅಲ್ಲಾ..  ಯಾವ ಆಟತಗೊಂಡ್ರೂ ಪರಸ್ಪರ ಬಡಿದಾಡಲೇಬೇಕು.. ಸೋಲಿನ ವಿರುದ್ಧ ಸೆಣಸಾಡೋದೇ ಆಟ.. ಆ ಕಾದಾಟದಲ್ಲಿ ಮಜಾ ಇದೆ.. ಹದವಾದ ಹುರುಪಿದೆ.. ಗೆಲ್ಲಲೇಬೇಕು ಅನ್ನೋ ಛಲ ಇದೆ.. ಅಪ್ಕೋರ್ಸ್ ಸೋಲಿನ ಭಯ.. ನೋವು ಇದ್ದೇ ಇದೆ..!


ಅಂದ್ಹಾಗೆ ಕ್ರಿಕೇಟ್ ಅಂದ್ರೆ ಇಷ್ಟು ಕ್ರೇಜ್ ಯಾಕೆ..? ಎಲ್ಲಾ ಆಟಗಳೂ ಆಟಗಳೇ ಅಲ್ವಾ..? ನನಗಂತೂ ಇವತ್ತಿಗೂ ಕಬಡ್ಡಿ ವಾಲಿ ಬಾಲ್ ಕೊಖೋಗಳನ್ನೆಲ್ಲಾ ನೋಡಿದಷ್ಟೇ ಖುಶಿ ಕ್ರಿಕೇಟ್ ನೋಡೋವಾಗ್ಲೂ ಆಗತ್ತೆ.. ಇನ್ನು ಆಡೋದ್ರಲ್ಲಿ ಕ್ರಿಕೇಟ್ಗಿಂತ ಚಿನ್ನಿ ದಾಂಡು ಕೂಡಾ ಹೆಚ್ಚಿನ ಖುಶಿ ಕೊಡತ್ತೇನೋ ಅನ್ಸತ್ತೆ.. ನಂಗೆ ಅನ್ಸೋ ಹಾಗೆ ಮತ್ಯಾರಿಗೂ ಅನ್ಸಲ್ವಾ..? ನನ್ನ ಸ್ನೇಹಿತರೆಲ್ಲಾ ನಮ್ಮ ಮಕ್ಕಳನ್ನ ಕ್ರಿಕೇಟ್ ಪ್ಲೇಯರ್ ಮಾಡ್ತೀವಿ.. ಚೆಸ್ ಆಡಿಸ್ತೀವಿ ಅಂತ ಹೇಳಿದ್ದನ್ನ ಕೇಳಿದಿನೇ ಹೊರ್ತು ನನ್ನ ಮಗಾ ಅಥವಾ ಮಗಳು ವಾಲಿಬಾಲ್ ಆಡ್ಬೇಕು ಅಂತ ಒಬ್ಬೇ  ಒಬ್ಬ ಉಲೀಲಿಲ್ಲಾ.. ಯಾಕ್ ಹಾಗ್ ಹೇಳ್ತಾರೆ.? ಇವರಿಗೆಲ್ಲಾ ಮಕ್ಕಳು ಆಡೋದನ್ನ ನೋಡಿ ಖುಶಿಯಾಗಲ್ಲಾ.. ಅದರಲ್ಲಿರೋ ಸಂಪಾಧನೆಯನ್ನ, ಫ್ಯಾನ್ ಪಾಲೋವಿಂಗನ್ನ ನೋಡಿ ಆಸೆಹುಟ್ಟತ್ತೆ ಅಷ್ಟೆ..


ಈ ಕ್ರಿಕೇಟ್ಗಿರೋ ಮಾನ್ಯತೆ ಎಲ್ಲಾ ಆಟಗಳಿಗೂ ಯಾಕಿಲ್ಲಾ..? ಅನ್ನೋ ಪ್ರಶ್ನೆ ನಾಲ್ಕು ಜನಾ ಇರೋ ಕಡೆ ಹಾಕಿದೆ.. ಟೆಸ್ಟ್ ಮ್ಯಾಚಿಂದದ ಹಿಡಿದು ಟಿ ಟ್ವೆಂಟಿ ತನಕ ಬಾಲ್ ಟು ಬಾಲ್ ನೊಡೋ ಅಪ್ಪಟ ಸೋಂಬೇರಿಗಳು ಕ್ರಿಕೇಟ್ಗಿಂತ ಸುಂದರವಾದ ಆಟಾನೇ ಇಲ್ಲಾ ಅಂದ್ಬಿಟ್ರು.. ಇನ್ಕೆಲ ಹುಡುಗೀರು ಸಿನ್ಸಿಯರ್ ಆಗಿ ಕ್ರಿಕೇಟ್ ಪ್ಲೇಯರ್ಸ್ಷ್ಟು ಹ್ಯಾಂಡ್ಸಮ್ ಆಗಿರೋರು ಬೇರೆ ಆಟದಲ್ಲಿ ಸಿಗಲ್ಲಾ ಅಂದ್ರು.. ಇನ್ನೊಂದಿಷ್ಟು ಬುದ್ಧಿವಂತರು ಕ್ರಿಕೇಟ್ಗೆ ಇಂಟರ್ನ್ಯಾಶನಲ್ ಲೇವಲ್ ಅಸೋಸಿಯೇಶನ್ ಇದೆ.. ಕ್ಲಬ್ಬಿದೆ.. ಇಷ್ಟಾಪಡೋರು ವಿಶ್ವದಾದ್ಯಂತ ಇದ್ದಾರೆ ಅಂತ ಅಂದ್ರು.. ಅದು ನಿಜಾನೆ..!

ನಮ್ಮ ಹಳ್ಳಿಯ ಕುಂಟೆಬಿಲ್ಲೆ ಚಿನ್ನಿದಾಂಡಿಗೂ  ಕ್ರಿಕೇಟ್ಗೂ ಹೋಲಿಸೋದಕ್ಕಾಗತ್ತಾ.. ಅಪ್ಕೋರ್ಸ್ ಅದರಷ್ಟು ಪಬ್ಲಿಸಿಟಿ ಇದಕ್ಕೆ ಕೊಟ್ಟು , ದೊಡ್ಡವರೆಲ್ಲಾ ಗ್ರೇಟ್ ಪ್ಲೇ ಅಂದಿದ್ರೆ ಹೋಲಿಸಬಹುದಿತ್ತಪ್ಪಾ.. ಆದ್ರೆ ಹಣ್ಣು ಉದುರಿದಷ್ಟು ಸುಲಭವಾಗಿ ಗಿಡಾ ಹುಟ್ಟಿ ಮರಾ ಆಗಿ ಕಾಯ್ ಬಿಡಲ್ವಲ್ಲಾ ..! ನಾವೇ ಹುಟ್ಸಿ ಬೆಳೆಸೋದಕ್ಕೆ ಸಾಕಷ್ಟು ಪೇಶನ್ಸ್ ಬೇಕು.. ಇಲ್ಲಾ ಯಾರಿಗೋ ಹುಟ್ಟಿ ಬೆಳೆದಿದ್ದನ್ನ ನಾವು ಪ್ರೀತಿಸಬೇಕು.. ನಮ್ಮದನ್ನ ದೇಶ ವಿದೇಶಗಳಿಗೆ ಕೊಂಡೊಯ್ಯೋದಕ್ಕಿಂತ ದೇಶ ವಿದೇಶದಲ್ಲಿರೋದನ್ನ ಪಾಲೋವ್ ಮಾಡಿ ನಮ್ಮದಾಗಿಸಿಕೊಂಡುಬಿಟ್ರೆ ಪಬ್ಲಿಸಿಟಿ ಸಮಸ್ಯೆನೇ ಇಲ್ಲಾ.. ಲಾಭಕ್ಕೂ ಕೊರತೆ ಇಲ್ಲಾ.. ಕ್ರಿಕೇಟ್ ಹಾಕಿಯನ್ನ ಮೀರಿ ಬೆಳೆದಿದ್ದು ಇದಕ್ಕೇ ಅಲ್ವಾ..? ಅವರ್ಯಾರೋ ಆಡಿ ತೋರಿಸಿದ್ದು ಈಗ ನಮ್ಮೆಲ್ಲರ ಮನಸನ್ನ ಆಳೋ ಆಟ.. ನಮ್ಮ ಆಟ.. ಒಂದು ಖುಶಿ ಅಂದ್ರೆ ನಮಗೆ ಎಂಥವರನ್ನೂ ಹಿಮ್ಮೆಟ್ಟೋ ನೈಪುಣ್ಯತೆ ಬಂದಿರೋದು..!

ಇವತ್ತು ಕ್ರಿಕೇಟ್ ಮೇನಿಯಾ ಅನ್ನೋದು ಅದ್ಯಾವ ಮಟ್ಟದಲ್ಲಿದೆ ಅಂದ್ರೆ, ಊಟಾ ನಿದ್ದೆ ಬಿಟ್ಟು ಟಿಕೇಟ್ಗಾಗಿ ಕ್ಯೂ ನಿಲ್ತಾರೆ.. ಅದ್ಯಾರೋ ಆಡಿಲ್ಲಾ ಅಂದ್ರೆ ನಾವು ಪ್ರಾಣ ಬಿಡ್ತೀವಿ ಅಂತಾರೆ..ಅವರೆಲ್ಲರಿಗಿಂತ ಮಜವಾಗಿರೋದು ಕಣ್ಣುಮಂಜಾದ ಅಜ್ಜಂದಿರೂ ಟಿ ವಿಯ ಮುಂದೆ ಕುಂತು ಮ್ಯಾಚ್ ನೊಡೋದು.. ಕ್ಯಾಚ್ ಅಂತ ಬೊಚ್ಚು ಬಾಯಿ ಬಿಚ್ಚಿ ಕೂಗೋದು.. ಮೊನ್ನೆ ಜಯನಗರದ  ಟಿ ವಿ ಶೋ ರೂಮ್ ಒಂದರ ಮುಂದೆ ಲೆಕ್ಕಾತಪ್ಪಿ ಜನಾ ಸೇರಿದ್ರು.. ಅವರ ನಡುವೆ ಒಬ್ಬ ಅಜ್ಜಿ ನಿಂತಿದ್ಲು.. ಈ ಹಿಂದೆ ಹತ್ತಿರದ ಸಿಗ್ನಲ್ಲಲ್ಲಿ ಭಿಕ್ಷೆ ಬೇಡ್ತಾ ಇದ್ದವಳು ಅವಳೇ ಅನ್ಸತ್ತೆ.. ಆಕೆ ಅವತ್ತು ಯಾರತ್ರಾನೂ ಊಟಾ ಮಾಡಿಲ್ಲಾ ಅಂತ ನೋವಲ್ಲಿ ಹೇಳ್ತಾ ಇರ್ಲಿಲ್ಲಾ, ಕೈ ಒಡ್ಡಿ ಬೇಡ್ಕೋತಾ ಇರ್ಲಿಲ್ಲಾ.. ಆಕೆಗೆ ಹಸಿವಿನ ಪರಿವೂ ಇದ್ದಂತಿರ್ಲಿಲ್ಲಾ.. ಬಾಲಿನ ವೇಗದ ಎದೆಬಡಿತಕ್ಕೆ ತಕ್ಕಂತಾ ಸುಪ್ಪರ್ ಎಕ್ಸ್ಪ್ರೆಶನ್ನು.. ಜಸ್ಟ್ ಆಯ್ ಕಾಂಟ್ ಬಿಲೀವ್.. ನನ್ನ ಕಣ್ಣನ್ನ ನನಗೇ ನಂಬೋದಕ್ಕಾಗ್ಲಿಲ್ಲಾ.. ಇವರ ಖುಶಿಗೆ ಮೆರಗು ಕೊಡೋ ಕಿರೀಟವನ್ನ ಬ್ಲೂ ಬಾಯ್ಸ್ ತಗೊಂಬರ್ತಾರೆ ಅಲ್ವಾ..?